ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರ ಒಂದೇ ದಿನ 216 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿದೆ.
ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ1959ಕ್ಕೆ ಏರಿಕೆಯಾಗಿದೆ. ಇವತ್ತು 15 ಜಿಲ್ಲೆಗಳಲ್ಲಿ ಡೆಡ್ಲಿ ವೈರಸ್ ವಕ್ಕರಿಸಿಕೊಂಡಿದೆ.
ರಾಜ್ಯದಲ್ಲಿಸಾವನ್ನಪ್ಪಿದ್ದವರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಈವರೆಗೆ 608 ಜನ ಗುಣಮುಖರಾಗಿದ್ದು, 1307 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವತ್ತು ಅತಿ ಹೆಚ್ಚು ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದ್ದು, ಬರೋಬ್ಬರಿ 72 ಜನರಿಗೆ ಡೆಡ್ಲಿ ಕರೋನಾ ವೈರಸ್ ಅಟ್ಯಾಕ್ ಆಗಿದೆ. ಎಲ್ಲಾ 72 ಕೇಸ್ ಗಳು ಮಹಾರಾಷ್ಟ್ರ ಲಿಂಕ್ ಹೊಂದಿರುವುದು ಜಿಲ್ಲೆಯ ಜನತೆಗೆ ಆತಂಕ ಸೃಷ್ಟಿಸಿದೆ.
ರಾಯಚೂರು, ದೇವದುರ್ಗ ಹಾಗೂ ಲಿಂಗಸೂಗುರಿನ ಕ್ವಾರಂಟೆನ್ ಕೇಂದ್ರದಲ್ಲಿ ಇದ್ದ ಮಹಾರಾಷ್ಟ್ರದಿಂದ ಆಗಮಿಸಿದ ಬಹುತೇಕರಿಗೆ ಸೋಂಕು ಕಾಣಿಸಿಕೊಂಡಿದೆ. ಶನಿವಾರ ಒಂದೇ ದಿನ 40 ಜನರಿಗೆ ಮಹಾಮಾರಿ ಕರೋನಾ ತಗುಲಿದೆ.
ಗದಗ ನಲ್ಲಿ15, ಮಂಡ್ಯ 28, ಚಿಕ್ಕಬಳ್ಳಾಪುರ 26, ರಾಜಧಾನಿ ಬೆಂಗಳೂರು 4, ಹಾಸನ 4, ಬೀದರ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 2, ಕೋಲಾರ 3, ದಾವಣಗೆರೆ 3, ಧಾರವಾಡ 5, ಉಡುಪಿ 3, ಬಳ್ಳಾರಿ 3, ಕಲಬುರಗಿ , ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
15 ವರ್ಷದ ಒಳಗಿನ 37 ಮಕ್ಕಳಿಗೆ ವೈರಸ್ ಅಟ್ಟಹಾಸ ಮೆರೆದಿದೆ. ಯಾದಗಿರಿಯಲ್ಲಿ ಒಂದು ವರ್ಷದ ಮಗುವಿಗೆ ಬಂದರೆ ನಾಲ್ಕು ತಿಂಗಳ ಮಗುವಿಗೆ ಕರೋನಾ ಸೋಂಕು ತಗುಲಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಿ-1783 ನೇ ಸೋಂಕಿತ ಕೋವಿಡೇತರಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.
ಅದೇ ರೀತಿ ಬೆಂಗಳೂರು ನಗರ ಜಿಲ್ಲೆಯ ಪಿ 1270 ನೇ ಸೋಂಕಿತ 32 ವರ್ಷದ ಯುವಕ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ನಿಗದಿತ ಆಸ್ಪತ್ರೆಗೆ ಮೇ 19ರಂದು ದಾಖಲಾಗಿದ್ದರು.
ಅವರು ದೀರ್ಘ ಕಾಲೀನ ವ್ಯಾಧೀಗಳಿಂದ ಬಳಲುತ್ತಿದ್ದರು. ಮೇ 23ರಂದು ಶನಿವಾರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.