ಬೆಂಗಳೂರು prajakiran.com : ರಾಜ್ಯದಲ್ಲಿ ಬುಧವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ ಹೊಸದಾಗಿ 120 ಜನರಿಗೆ ಸೋಂಕು ಹರಡಿದೆ. ಇದರಿಂದಾಗಿ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆ ಕಂಡಿದೆ.
120 ಸೋಂಕಿತರಲ್ಲಿ, 68 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದರೆ, ಅಂತರ್ ರಾಷ್ಟ್ರೀಯ ಪ್ರಯಾಣಿಕರು 3 ಜನರಿದ್ದಾರೆ.
ಇಂದು ರಾಜ್ಯದಲ್ಲಿ 257 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 2862 ಜನ ಗುಣಮುಖರಾಗಿದ್ದು, 3108 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14 ಜನ ಐಸಿಯುನಲ್ಲಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 69ಕ್ಕೆ ಬಂದು ನಿಂತಿದೆ.
ಬುಧವಾರ ಪತ್ತೆಯಾದ 120 ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಅದರಲ್ಲೂ ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿಬುಧವಾರ 42 ಪ್ರಕರಣಗಳು ದಾಖಲಾಗಿದ್ದು, ಬಿಸಲನಾಡು ಯಾದಗಿರಿಯಲ್ಲಿ 27 ಪ್ರಕರಣಗಳು ಕಂಡು ಬಂದಿವೆ.
ಇನ್ನೂಳಿದಂತೆ ವಿಜಯಪುರದಲ್ಲಿ 13, ಕಲಬುರಗಿಯಲ್ಲಿ11, ಬೀದರ್ ನಲ್ಲಿ 5, ದಕ್ಷಿಣ ಕನ್ನಡದಲ್ಲಿ 4, ಧಾರವಾಡ 4, ದಾವಣಗೆರೆಯಲ್ಲಿ 3, ಹಾಸನ 3, ಬಳ್ಳಾರಿ 3, ಬಾಗಲಕೋಟೆ 2, ರಾಮನಗರ 2, ಬೆಳಗಾವಿ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಪಿ-6006 ನೇ ಸೋಂಕಿತ 32 ವರ್ಷದ ಯುವಕ ಸಾವನ್ನಪ್ಪಿದ್ದಾರೆ.
ಜೂನ್ 10ರಂದು ನಿಧನದ ನಂತರ ಬೆಂಗಳೂರು ನಗರದ ನಿಗದಿತ ಆಸ್ಪತ್ರೆಗೆ ಕರೆತಂದಿದ್ದರು. ಆ ಮೂಲಕ ಬೆಂಗಳೂರು ನಗರ ಜಿಲ್ಲೆಯಲ್ಲಿ ಈವರೆಗೆ 20 ಜನ ಸಾವನ್ನಪ್ಪಿದಂತಾಗಿದೆ.
ಅದೇ ರೀತಿ ಪಿ 6025ನೇ ಸೋಂಕಿತ 57 ವರ್ಷದ ವ್ಯಕ್ತಿ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಜೂನ್ 8ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಇನ್ನೂ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾಗೆ ಮೊದಲ ಬಲಿಯಾಗಿದ್ದು, ಪಿ-1943 ನೇ ಸೋಂಕಿತ ವ್ಯಕ್ತಿ 58 ವರ್ಷದ ಪುರುಷ ಧಾರವಾಡ ಜಿಲ್ಲೆಯ ನಿವಾಸಿಯಾಗಿದ್ದರು.
ಅವರು ಮೇ 23ರಂದು ನಿಗದಿತ ಹುಬ್ಬಳ್ಳಿ-ಧಾರವಾಡದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜೂನ್ 9ರಂದು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.