ಧಾರವಾಡ prajakiran.com : ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ರೈತರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕ್ಯಾರೆ ಎನ್ನದಿರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಕಿಡಿಕಾರಿದರು.
ಅವರು ಭಾನುವಾರ ರಾತ್ರಿ ರೈತರ ಹೋರಾಟ ಬೆಂಬಲಿಸಿ ಧಾರವಾಡದ
ಕಲಾಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ಜಾಗಟೆ ಬಾರಿಸುವ ಮೂಲಕ ತಮ್ಮ
ಆಕ್ರೋಶ ವ್ಯಕ್ತಪಡಿಸಿದರು.
ಒಂದು ಗಂಟೆಗಳ ಕಾಲ ಮನ್ ಕೀ ಬಾತ್ ಮಾತನಾಡಿ ಬುರುಡೆ ಬಿಡುವ ಬದಲು ದೇಶದ ಎಂಬತ್ತು ಕೋಟಿ ರೈತರ ಅಳಲು ಆಲಿಸಬೇಕು ಎಂದು ಹೇಳಿದರು.
ಜನ ವಿರೋಧಿ, ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳ ಮೂಲಕ ಬಂಡವಾಳ ಶಾಹಿಗಳ ಹಿತ ಕಾಪಾಡುತ್ತಿದ್ದಾರೆ ಎಂದು ದೂರಿದರು.
ಈ ಮೂರು ಕಾಯ್ದೆಯನ್ನು ತಕ್ಷಣ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಶ್ರೀಶೈಲ ಕಮತರ, ರವಿ ಗೌಳೆ, ಸಲೀಂ ಸಂಗನಮುಲ್ಲಾ, ವಿಲ್ಸನ್ ಫೆರ್ನಾಂಡಿಸ್, ಐ.ಬಿ. ನಿಡಗುಂದಿ ,ಗೋನ್ಸಲ್ವಿಸ್, ವಿನಾಯಕ ಕಂಬಳಿ, ರಮೇಶ ಕಾಂಬ್ಳೆ ಇನ್ನಿತರರು ಭಾಗವಹಿಸಿದ್ದರು.