ಕಾಣೆಯಾಗಿದ್ದಾರೆ ಹುಡುಕಿಕೊಡಿ ಘೋಷಣೆ
ಶಾಸಕ ಅರವಿಂದ ಬೆಲ್ಲದ ಮನೆಗೆ ಮನವಿ ಪತ್ರ ಅಂಟಿಸಿ ಆಕ್ರೋಶ
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅವಳಿ ನಗರದ ಸುಮಾರು ೧ ಲಕ್ಷ ೪೧ ಸಾವಿರ ಜನರ ನೀರಿನ ಕರ ಬಾಕಿ ಮನ್ನಾ ಮಾಡುವಂತೆ ಆಗ್ರಹಿಸಿ ಭಾನುವಾರ ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದ, ಗ್ರಾಮೀಣ ಶಾಸಕ ಅಮೃತ ದೇಸಾಯಿಯವರ ಮನೆಗೆ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು.
ಶಾಸಕ ಅರವಿಂದ ಬೆಲ್ಲದ ಮನೆಗೆ ಮುತ್ತಿಗೆ ಹಾಕಲು ಹೊರಟ್ಟಿದ್ದರಿಂದ ಪೊಲೀಸರು ತಡೆಯೊಡ್ಡಿದರು. ಇದರಿಂದಾಗಿ ಪೊಲೀಸರ ಜೊತೆಗೆ ಕೆಲ ಕಾಲ ಮಾತಿನಚಕಮಕಿ ನಡೆಯಿತು. ಬಳಿಕ ಶಾಸಕ ಬೆಲ್ಲದ ಮನೆಗೆ ಮುತ್ತಿಗೆ ಹಾಕಿ ಶಾಸಕರು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಘೋಷಣೆ ಕೂಗಿದರು.
ಅರ್ಧಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರೂ ಯಾರೊಬ್ಬರು ಸುಳಿಯದ ಕಾರಣ ಬೆಲ್ಲದ ಮನೆ ಗೋಡಗೆ ಮನವಿ ಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಧಾರವಾಡ ಗ್ರಾಮೀಣ ಶಾಸಕರ ಮನೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೀರಿನ ಕರಕ್ಕೆ ಬಡ್ಡಿಗೆ ಚಕ್ರ ಬಡ್ಡಿಸೇರಿಸಿ ಮೊತ್ತವನ್ನು ದ್ವಿಗುಣಗೊಳಿಸಿದೆ. ಬಡವರಿಗೆ ೫೦, ೬೦ ಸಾವಿರ ಬಿಲ್ ಕಟ್ಟುವಂತೆ ನೀಡಿದೆ.
ಹಲವು ವರ್ಷಗಳ ಕಾಲ ಸಮರ್ಪಕವಾಗಿ ನೀರಿನ ಬಿಲ್ ನೀಡದೆ ಈಗ ಏಕಾಏಕಿ ವಸೂಲಿಗೆ ಎಲ್ ಆಂಡ್ ಟಿ ಖಾಸಗಿ ಕಂಪನಿಗೆ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
೨೦೧೫ರಲ್ಲಿಕೇವಲ ೩೦ರಿಂದ ೩೫ ಕೋಟಿ ಇದ್ದ ನೀರಿನ ಕರ ಬಾಕಿ ಈಗ ೨೦೨೧ರ ವೇಳೆಗೆ ೨೦೫ ಕೋಟಿಗೆ ಬಂದಿದೆ. ಇದನ್ನು ನೋಡಿದರೆ ಬಡ್ಡಿಗೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ಮಹಾನಗರ ಪಾಲಿಕೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಗುಡುಗಿದರು.
ನೀರಿನ ಕರ ಬಾಕಿ ಉಳಿಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳೇ ಹೊಣೆ. ಇವರು ಈವರೆಗೆ ಪ್ರತಿ ತಿಂಗಳು ಸಮರ್ಪಕ ಬಿಲ್ ನೀಡಿಲ್ಲ. ಈ ಹಿಂದೆ ತಿಂಗಳಿಗೆ ನಾಲ್ಕು ಬಾರಿ ನೀರು ಸರಬರಾಜು ಮಾಡಲಾಗುತ್ತಿತ್ತು.
ಈಗ ಆರು ಬಾರಿ ಸರಬರಾಜು ಆಗಿರಬಹುದು. ಆದರೆ ಕೋವಿಡ್ ಹಿನ್ನಲೆಯಲ್ಲಿ ಜನತೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಗಾಯದ ಮೇಲೆ ಬರೆ ಎಳೆಯುವುದು ಸರಿಯಲ್ಲ.
ಬೇಕಿದ್ದರೆ ಮೊದಲು ನೀರಿನ ಕರ ಬಾಕಿ ಮನ್ನಾ ಮಾಡಿ ಎಂದು ಮಹಾನಗರ ಜನತೆ ಪರವಾಗಿ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮನವಿ ಮಾಡಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ, ಶರಣಪ್ಪಕೊಟಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಯಾಶೀನ ಹಾವೇರಿಪೇಟ, ಆನಂದ ಸಿಂಗನಾಥ, ಬ್ಲಾಕ್ ಅಧ್ಯಕ್ಷರಾದ ಬಸವರಾಜ ಮಲಕಾರಿ, ಸತೀಶ ತುರಮುರಿ, ಮುಖಂಡರಾದ ಸ್ವಾತಿ ಮಳಗಿ, ವಸಂತಅರ್ಕಾಚಾರಿ, ಶಿವು ಚನ್ನಗೌಡರ, ಮುತ್ತು ಕೋಟೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.