*ಆಡಳಿತದಲ್ಲಿ ವೇಗ ಮತ್ತು ಯೋಜನೆಗಳ ಪರಿಣಾಮಕಾರಿ ಜಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ*
*ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ*
ಬೆಂಗಳೂರು prajakiran. com : ಮಾಜಿ ಸಚಿವ ಕೆಎಸ. ಈಶ್ವರಪ್ಪ ಅವರಿಗೆ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕ್ಲೀನ್ ಚೀಟ್ ನೀಡಲಾಗಿದೆ.
ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈಶ್ವರಪ್ಪ ಪ್ರಕರಣದಲ್ಲಿ ಇಲಾಖೆಯವರು ಬಿ ರಿಪೋರ್ಟ್ ಹಾಕಿದ್ದಾರೆ.
ಅದು ಕೋರ್ಟ್ಗೆ ಸಲ್ಲಿಕೆಯಾಗುತ್ತದೆ. ಎಚ್.ವೈ.ಮೇಟಿ ಪ್ರಕರಣದಲ್ಲಿ ಎಫ್ಐಆರ್ ಹಾಕದೆ, ಬಿ ರಿಪೋರ್ಟ್ ಹಾಕಿದ್ದರು.
ಅದು ಅವರು ಮೊದಲೇ ತೀರ್ಮಾನ ಮಾಡಿಕೊಂಡಿದ್ದರು. ವೀಡಿಯೋ ಸಾಕ್ಷಿ ಇದ್ದಾಗಲೂ ಎಫ್ಐಆರ್ ಹಾಕಿರಲಿಲ್ಲ ಎನ್ನುವುದು ಡಿ.ಕೆ ಶಿವಕುಮಾರ್ ಗೆ ಮರೆತು ಹೋಗಿದೆ ಎಂದು ಕುಟುಕಿದರು.
ಬಜೆಟ್ ನಲ್ಲಿ ಘೋಷಣೆ ಮಾಡಿದ ಕೆಲವು ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.
ಇನ್ನು ಕೆಲವು ಯೋಜನೆಗಳು ಅನುಮೋದನೆ ನೀಡುವ ಹಂತದಲ್ಲಿವೆ. ನಿಗಧಿತ ಸಮಯದಲ್ಲಿ ಯೋಜನೆಗಳ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳ ಜಾರಿಗಾಗಿ ಭೂ ಸ್ವಾಧೀನ ಮತ್ತು ಟೆಂಡೆರ್ ಪ್ರಕ್ರಿಯೆ ಶೀಘ್ರವಾಗಿ ಆಗಬೇಕು. ಈಗಾಗಲೇ ಹಲವಾರು ಜನಪರ ಯೋಜನೆಗಳು ಜಾರಿಯಾಗಿವೆ.
ಅವುಗಳಲ್ಲಿ ಗೊಂದಲಗಳಿದ್ದರೆ, ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೆಲವು ಬಿಪಿಎಲ್ ಕಾರ್ಡ್ ಗಳ ಬಗ್ಗೆ ಗೊಂದಲಗಳಿವೆ. ಹೊಸ ಕಾರ್ಡ್ ಗಳಲ್ಲಿ ಅಸಲಿ ಮತ್ತು ನಕಲಿ ಕಾರ್ಡ್ ಬಳಕೆ ಆಗುತ್ತಿದೆ. ಅವುಗಳನ್ನು ತೆಗೆದು ಹಾಕಲು ಸೂಚನೆ ನೀಡಿದ್ದೇನೆ.
ಬಜೆಟ್ ಯೋಜನೆಗಳು ಕಟ್ಟ ಕಡೆಯ ಮನುಷ್ಯನಿಗೆ ತಲುಪಬೇಕು ಎನ್ನುವ ದೃಷ್ಠಿಯಿಂದ ಹಲವು ನಿರ್ದೇಶನವನ್ನು ಕೊಟ್ಟಿದ್ದೇನೆ ಎಂದು ಬೊಮ್ಮಾಯಿ ಅವರು ಎಂದು ತಿಳಿಸಿದರು.
*ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ*
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ರಾಜ್ಯದಲ್ಲಿ ಶೇ. 100 ರಷ್ಟು ಜಾರಿಯಾಗಿವೆ. ಕೇಂದ್ರದ ಜನಪರ ಯೋಜನೆಗಳ ತಕ್ಷಣ ಜಾರಿಗೆ ಸೂಚಿಸಿ, ವಿಶ್ಲೇಷಣೆ ಮಾಡಿದ್ದೇನೆ.
ಪಿ.ಎಂ.ಜೆ.ಎಸ್.ವೈ, ಸ್ವ-ನಿಧಿ ಯೋಜನೆ ಶೀಘ್ರದಲ್ಲಿ ಜಾರಿಯಾಗಬೇಕು. ರೈತ ಸಮ್ಮಾನ ನಿಧಿ ಸೇರಿದಂತೆ ಹಲವಾರು ಯೋಜನೆಗಳು ಈಗಾಗಲೇ ಜಾರಿಯಾಗಿವೆ. ರಾಜ್ಯದಲ್ಲಿ ಡ್ರೋನ್ ಸರ್ವೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದರು.