ಪಿಎಸ್ಐ ಅಕ್ರಮ ನೇಮಕಾತಿ : ಕಿಂಗ್ಪಿನ್ ದಿವ್ಯಾ ಹಾಗರಗಿ
ಕಲಬುರಗಿ prajakiran.com ಏ. 29: ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಕಿಂಗ್ಪಿನ್ ದಿವ್ಯಾ ಹಾಗರಗಿ ಕೊನೆಗೂ ಸಿಐಡಿ ಪೋಲಿಸರ ಬಲೆಗೆ ಬಿದ್ದಿದ್ದಾರೆ.
ನೆರೆಯ ಮಹಾರಾಷ್ಟ್ರದ ಪುಣೆಯಲ್ಲಿ ಹಾಗರಗಿ ಸಮೇತ ಅವರ ತಂಡ ಇರುವ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ ರಾಘವೇಂದ್ರ ಹೆಗಡೆ ನೇತೃತ್ವದ ಸಿಐಡಿ ಪೋಲಿಸರ ತಂಡ, ಗುರುವಾರ ರಾತ್ರಿ ಹೋಟೆಲ್ವೊಂದರಲ್ಲಿ ಊಟ ಮಾಡುವಾಗ ಬಂಧಿಸಿದೆ.
ಕಳೆದ 19 ದಿನಗಳಿಂದ ಈ ಅಕ್ರಮ ನೇಮಕಾತಿ ಹಗರಣದ ದಿವ್ಯಾ ಹಾಗರಗಿ ಹಾಗೂ ನಾಲ್ವರು ನಾಪತ್ತೆಯಾಗಿದ್ದರು.
ಈ ಅಕ್ರಮ ನೇಮಕಾತಿ ಪ್ರಕರಣದಲ್ಲಿನ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರ ಬಂಧನಕ್ಕಾಗಿ ಸಿಐಡಿ ಪೋಲಿಸರು ಮೂರು ತಂಡಗಳನ್ನು ರಚಿಸಿ, ಜಾಲ ಬಿಸಿದ್ದರು.
ಸೋಲ್ಲಾಪುರದ ಉದ್ಯಮಿ ಸುರೇಶನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಸುರೇಶ ಹಾಗೂ ದಿವ್ಯಾ ಹಾಗರಗಿ ಮಧ್ಯೆ ಕಳೆದ ಹಲವು ವರ್ಷಗಳಿಂದ ವ್ಯವಹಾರ ನಡೆದಿದ್ದರ ಬಗ್ಗೆಯೂ ಸಿಐಡಿ ತಂಡ ಮಾಹಿತಿ ಕಲೆ ಹಾಕಿದ್ದಾರೆ.
ಅಕ್ರಮ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಬೆನ್ನಲ್ಲೇ ದಿವ್ಯಾ ಹಾಗರಗಿ ಜಾಮೀನಿಗಾಗಿ ನ್ಯಾಯಾಲದ ಮೊರೆ ಹೋಗಿದ್ದರು. ಆದರೆ ಸಿಐಡಿ ಪೋಲಿಸರ ತಕರಾರು ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು, ಅಲ್ಲದೇ ಒಂದು ವಾರದೊಳಗೆ ತಲೆತಪ್ಪಿಸಿಕೊಂಡಿರುವ ಆರೋಪಿಗಳು ಶರಣಾಗತರಾಗದೇ ಹೋದರೆ ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು.