ಆರಂಭಗೊಂಡ ಸಿಐಡಿ ತನಿಖೆ
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೋರಾಟಕ್ಕೆ ಎರಡನೇ ಹಂತದ ಜಯ
ಧಾರವಾಡ ಪ್ರಜಾಕಿರಣ.ಕಾಮ್ ಎಕ್ಸಕ್ಲೂಸಿವ್ : ಧಾರವಾಡದ ಕೆ ಐ ಎ ಡಿ ಬಿಯಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭಗೊಂಡಿದೆ.
ಕಳೆದ ಹಲವು
ದಿನಗಳಿಂದ ಧಾರವಾಡದಲ್ಲಿ ಬಿಡಾರ ಹೂಡಿರುವ ಸಿ ಐ ಡಿ ಅಧಿಕಾರಿಗಳು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನನನ್ಬು ಖೆಡ್ಡಾಕ್ಕೆ ಕೆಡವಲು ತೀವ್ರವಾದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಳೆದ ಹಲವು ವರ್ಷಗಳ ಕಾಲ ಸ್ಥಳೀಯ ಪತ್ರಿಕೆಯೊಂದರ
ಹೆಸರಿನಲ್ಲಿ ಕೆ ಐ ಡಿ ಬಿ ಕಚೇಯಲ್ಲಿ ಏಜೆಂಟ್ ಗಿರಿ ಮಾಡುತ್ತಿದ್ದ ಆಶ್ಫಕ್ ದುಂಡಸಿ ವಿ.ಡಿ. ಸಜ್ಜನ ಗೆಳೆತನ ಬೆಳೆಸಿದ ಪರಿಣಾಮ ಕೋಟ್ಯಾಧೀಶನಾಗಿದ್ದರ ಕುರಿತು ಸಿ ಐ ಡಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ಡ್ರಿಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಿಐಡಿ ಅಧಿಕಾರಿಗಳು ಕೇಳಿದ ಹತ್ತು ಹಲವು ರೋಚಕ ಪ್ರಶ್ನೆಗಳಿಗೆ ತಬ್ಬಿಬ್ಬಾದ ಆಶ್ಫಕ್ ದುಂಡಿಸಿ, ಕೆಲ ಕಾಲ ಉತ್ತರಿಸಲು ತಡಬಡಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಸಿಐಡಿ ಇನ್ಸಪೆಕ್ಟರ್ ಎಲ್. ಆರ್. ಅಗ್ನಿ ಅವರಿಗೆ ಪ್ರಜಾಕಿರಣ.ಕಾಮ್ ಸಂರ್ಪಿಸಿದಾಗ ಅವರು ವಿಚಾರಣೆ ನಡೆಸಿ, ಮತ್ತೆ ಡಿ. 9 ರಂದು ಆಗಮಿಸಲು ಸೂಚಿಸಿರುವುದಾಗಿ ಖಚಿತಪಡಿಸಿದ್ದಾರೆ.
ಈ ಹಿಂದೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಹಗರಣದಲ್ಲಿ ಭಾಗಿಯಾದ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ, ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರ, ಗುತ್ತಿಗೆ ನೌಕರ ಹೇಮಚಂದ್ರ ಚಿಂತಾಮಣಿ ಹಾಗೂ ಹಲವು ರೈತರು ಮತ್ತು ಐಡಿಬಿಐ ಬ್ಯಾಂಕ್, ಕೆವಿಜಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿ 14 ಜನರ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು.
ಇಪ್ಪತ್ತೈದು ಕೋಟಿ ಹಗರಣದ ಬಗ್ಗೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ದಾಖಲೆ ಬಿಡುಗಡೆ ಮಾಡಿ ಈ ಕುರಿತು ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಲಿಖಿತ ದೂರು ನೀಡಿದ ನಂತರ ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರ ಪ್ರಕರಣ ದಾಖಲಿಸಿದ ಬಳಿಕ ಮಹತ್ವದ ಹೆಜ್ಜೆ ಇರಿಸಿತ್ತು.
ಜೊತೆಗೆ ಇಬ್ಬರು ಸಿಬ್ಬಂದಿಗಳಾದ ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರನನ್ನು ಸೇವೆಯಿಂದ ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಇದು ಬಹು ಕೋಟಿ ಹಗರಣವಾಗಿದ್ದು, ಇದನ್ನು ಸಿಐಡಿ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದರು.
ಅಲ್ಲದೆ, ಈ ಕುರಿತು ಧಾರವಾಡ ಲೋಕಾಯುಕ್ತರಿಗೆ ಕೂಡ ನೊಂದ ರೈತ ಶಿವನಗೌಡ ಪಾಟೀಲ್, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಸದಸ್ಯರಾದ ಮಿಥುನ್ ಜಾಧವ್, ವಕೀಲರಾದ ಐ.ಕೆ. ಧರಣಗೌಡರ, ಗುರು ಅಂಗಡಿ, ರೈತ ಶಿವನಗೌಡ ಹಾಗೂ ಪದಾಧಿಕಾರಿಗಳು ದೂರು ಸಲ್ಲಿಸಿದ್ದರು.
ಆದರೂ ರಾಜ್ಯದ ಬಿಜೆಪಿ ಸರಕಾರ ಇದನ್ನು ಮೊದಲ ಹಂತದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಹಿನ್ನೆಲೆಯಲ್ಲಿ 420 ಕೇಸ್ ದಾಖಲಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಹೋರಾಟಕ್ಕೆ ಎರಡನೇ ಹಂತದ ಜಯ ಸಿಕ್ಕಂತಾಗಿದೆ.
ಈ ಹಗರಣದಲ್ಲಿ ಸಣ್ಣಪುಟ್ಟ ಪತ್ರಿಕೆ ಹೆಸರು ಹೇಳಿಕೊಂಡು ಬದುಕು ಸಾಗಿಸುವ ಕೆಲ ಆಸೆಬುರಕ ಪತ್ರಕರ್ತರು, ಮರಿ ಪುಡಾರಿ ರಾಜಕಾರಣಿಗಳು ಹಾಗೂ ಕೆ ಐ ಎ ಡಿ ಬಿಯ ಏಜೆಂಟ್ ಆಗಿ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ ದೊಡ್ಡ ಕುಳಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತದೆ.
ಅವರನ್ನು ವಿಚಾರಣೆ ನಡೆಸಿ ಕಂಬಿ ಹಿಂದೆ ಹಾಕಿದಾಗ ಮಾತ್ರ ಇದರ ಸತ್ಯಾಂಶ ಹಾಗೂ ಇನ್ನೊಂದು ಕರಾಳ ಮುಖ ಬಯಲಿಗೆ ಬರುತ್ತದೆ.