ಧಾರವಾಡ prajakiran.com : ರಾಜ್ಯ ಸಚಿವ ಸಂಪುಟ ಸೇರಲು ಅತ್ತ ಶಾಸಕ ಅರವಿಂದ ಬೆಲ್ಲದ ಭಾರೀ ಕಸರತ್ತು ನಡೆಸಿರುವ ಬೆನ್ನಲ್ಲೇ ಅವರ ಸ್ವಕ್ಷೇತ್ರ ಧಾರವಾಡದಲ್ಲಿ ಅವರ ಬೆಂಬಲಿಗರು ವಿವಿಧೆಡೆ ದೇವರ ಮೊರೆ ಹೋಗಿದ್ದಾರೆ.
ಧಾರವಾಡ ಹೊರವಲಯದ ಸೋಮೇಶ್ವರ ದೇವಸ್ಥಾನದಲ್ಲಿ ಅನೇಕ ಬೆಂಬಲಿಗರು ಇವತ್ತು, ಬೆಲ್ಲದ ಹೆಸರಿನಲ್ಲಿಯೇ ರುದ್ರಾಭಿಷೇಕ ಮಾಡಿದ್ದಾರೆ.
ಇಂದು ಸೋಮೇಶ್ವರ ದೇವರ ವಾರವೂ ಆಗಿರುವುದರಿಂದ ಬೆಲ್ಲದ ಹೆಸರಿನಲ್ಲಿಯೇ ರುದ್ರಾಭಿಷೇಕ ಬುಕ್ ಮಾಡಿದ್ದ ವಿವಿಧ ಬೆಂಬಲಿಗರು ಬೆಲ್ಲದ ಅವರ ಭಾವಚಿತ್ರವನ್ನು ಹಿಡಿದುಕೊಂಡು ದೇವರಿಗೆ ಅಭಿಷೇಕ ಮಾಡಿದರು.
ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಸ್ಥಾನದ ಲಿಸ್ಟ್ನಲ್ಲಿದ್ದರು. ಹೀಗಾಗಿ ಅವರಿಗೆ ಸಚಿವ ಸ್ಥಾನವನ್ನಾದರೂ ಕೊಡಬೇಕು ಎಂದು ಆಗ್ರಹಿಸಿದರು.
ಮತ್ತೊಂದೆಡೆ ರಾಯಾಪುರದ ದುರ್ಗಾದೇವಿ ದೇವಸ್ಥಾನದಲ್ಲಿಯೂ ಬೆಲ್ಲದ ಬೆಂಬಲಿಗರು, ದುರ್ಗಾದೇವಿಗೆ ಪೂಜೆ ಸಲ್ಲಿಸಿ ತಮ್ಮ ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ಸಿಗುವಂತಾಗಲಿ ಎಂದು ಬೇಡಿಕೊಂಡರು.
ಇನ್ನು ಧಾರವಾಡದಲ್ಲಿ ಸಾಹಿತಿಗಳ ವಲಯದಿಂದಲೂ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆಗಳು ಕೇಳಿ ಬಂದಿದ್ದು, ಹಿರಿಯ ಕವಿ ಡಾ. ಚೆನ್ನವೀರ ಕಣವಿ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಸಹ ಬರೆದಿದ್ದಾರೆ.