ಧಾರವಾಡ prajakiran.com : ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದು, ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಹೋರಾಟಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕರೆನೀಡಿದೆ.
ಕಾರ್ಯಕರ್ತೆಯರಿಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಜನವಿರೋಧಿ ಧೋರಣೆಯ ವಿರುದ್ಧ ರಾಜಿರಹಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮನವಿ ಮಾಡಿದ್ದು, ಇಲಾಖೆಯ ಒತ್ತಡಗಳಿಗೆ ಮಣಿಯದೇ ಮುಂದಿನ ರಾಜಿರಹಿತ ಹೋರಾಟಕ್ಕೆ ಮುನ್ನಡೆಸಲು ನಿರ್ಧರಿಸಿದೆ.
ಜು. ೧೩ರಂದು ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಪಟ್ಟಣ, ಗ್ರಾಮಗಳ ಪಂಚಾಯತಿ, ನಗರದ ಪಾಲಿಕೆ, ನಗರಸಭೆ, ಪುರಸಭೆ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.
ಜು. ೧೪ರಂದು ಜಿಲ್ಲಾ-ತಾಲೂಕು, ಪಟ್ಟಣ ಕೇಂದ್ರಗಳಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸುವುದು.
ಜು. ೧೫ ರಂದು ಮುಖ್ಯಮಂತ್ರಿಗಳಿಗೆ ಎಲ್ಲಾ ಆಶಾ ಕಾರ್ಯಕರ್ತೆಯರು ಪತ್ರ ಬರೆಯಲಿದ್ದಾರೆ. ಜು. ೧೬ ರಂದು ರಾಜ್ಯದ ಎಲ್ಲಾ ಪಿಎಚ್ಸಿ ಮುಂದೆ ಆಶಾ ಕಾರ್ಯಕರ್ತೆಯರು ಧರಣಿ ನಡೆಸಲಿದ್ದಾರೆ.
ಜು. ೧೭ರಂದು ಕುಟುಂಬ ಸಮೇತ ಆಶಾ ಕಾರ್ಯಕರ್ತೆಯರು ಬೇಡಿಕೆಯ ಪೋಸ್ಟರ್ ಹಿಡಿದು ಪೋಟೊ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಧಾರವಾಡ ಜಿಲ್ಲಾ ಉಪಾಧ್ಯಕ್ಷೆ ಭುವನಾ ಬಳ್ಳಾರಿ ತಿಳಿಸಿದ್ದಾರೆ.