ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಎಪ್ರಿಲ್ 5ಕ್ಕೆ ಮುಂದೂಡಿದೆ.
ಬೆಂಗಳೂರು ಹೈಕೋರ್ಟ್ ಪೀಠದ ಹಿರಿಯ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ನಾ ಅವರ ಎದುರು ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಸಿಬಿಐ ಗೆ ಈ ಹಿಂದೆ ತಕರಾರು ಸಲ್ಲಿಸಲು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು.
ಸಿಬಿಐ ಪರ ವಕೀಲರು ಮಂಗಳವಾರ ನ್ಯಾಯಾಲಯ ಕ್ಕೆ ಹಾಜರಾಗಿ ಇನ್ನಷ್ಟು ಸಮಯಾವಕಾಶ ಕೋರಿದ್ದರಿಂದ ವಿಚಾರಣೆ ಮುಂದೂಡಲಾಯಿತು.
ಸಿಬಿಐ ಅಧಿಕಾರಿಗಳ ಪರ ವಕೀಲರು
ಮಂಗಳವಾರ ತಕರಾರು ಸಲ್ಲಿಸಲು ಮತ್ತಷ್ಟು ಸಮಯಾವಕಾಶ ಕೋರಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಅವರು ತಕರಾರು ಅರ್ಜಿ ಸಲ್ಲಿಸಿದ ಬಳಿಕ ಅದಕ್ಕೆ ವಿನಯ ಕುಲಕರ್ಣಿ ಪರ ವಕೀಲರು ಹಾಗೂ ಸಿಬಿಐ ಪರ ವಕೀಲರು ವಾದ,
ಪ್ರತಿವಾದ ಮಂಡಿಸಲಿದ್ದಾರೆ.
ಈಗಾಗಲೇ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯ, ಧಾರವಾಡ ಹೈಕೋರ್ಟ್ ಮತ್ತು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಬಿಐ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕವಷ್ಟೇ ಇತ್ತೀಚೆಗೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು.
ಹೀಗಾಗಿ ಮತ್ತೊಮ್ಮೆ ವಿನಯ ಕುಲಕರ್ಣಿ ಅವರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.
ಇಲ್ಲಿ ಮತ್ತೊಂದು ಸುತ್ತಿನ ವಾದ ಪ್ರತಿವಾದ ನಡೆದ ಬಳಿಕ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜಾಮೀನು ಸಿಗುತ್ತೋ ಇಲ್ಲವೋ ಎಂಬುದನ್ನು ಬರುವ ದಿನಗಳಲ್ಲಿ
ಕಾಯ್ದು ನೋಡಬೇಕಾಗಿದೆ.