ಇಂಜಿನಿಯರ್, ಗುತ್ತಿಗೆದಾರನ ವಿರುದ್ದ ಕ್ರಮಕ್ಕೆ ಆಗ್ರಹ
ಪಾದಯಾತ್ರೆ ಮಾಡಿ ಬಿಸಿ ತಾಕಿಸಲು ನಿರ್ಧಾರ
ಧಾರವಾಡ prajakiran.com : ಶಾಲ್ಮಲಾ ನದಿಯಿಂದ ಸಂಗ್ರಹವಾಗುವ ಸೋಮೇಶ್ವರ ಕೆರೆಯ ನೀರನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರು ಸೇರಿ ಖಾಲಿ ಮಾಡಿದ್ದನ್ನು ಪ್ರತಿಭಟಸಿ ಏ. 8 ರಂದು ಬೆಳಿಗ್ಗೆ 11 ಗಂಟೆಗೆ ಪಾದಯಾತ್ರೆ ಮೂಲಕ ಬಿಸಿ ತಾಕಿಸಲು ನಿರ್ಧರಿಸಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲೆಯ ಅಧ್ಯಕ್ಷ ಸುಧೀರ ಮುಧೋಳ ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಜಿಲ್ಲಾಧಿಕಾರಿಗಳ ಮುಖಾಂತರ ಸಣ್ಣ ನೀರಾವರಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು.
ಶಾಲ್ಮಲಾ ನದಿಯ ನೀರು ಜಾನುವಾರುಗಳಿಗೆ ಹಾಗೂ ವಿಶೇಷವಾಗಿ ಪ್ರಾಣಿ, ಪಕ್ಷಿಗಳಿಗೆ ಮತ್ತು ಜಲಚರ ಜೀವಿಗಳಿಗೆ ಸಂಜೀವಿನಿಯಾಗಿದೆ.
ಈ ಪ್ರದೇಶದ ರಾಜೀವ ಗಾಂಧಿ ನಗರದ ದಲಿತರು, ಹಿಂದುಳಿದವರು , ಅಲ್ಪಸಂಖ್ಯಾತರು ಹಾಗೂ ಸುಡುಗಾಡು ಸಿದ್ಧರ ಕಾಲೋನಿಯ ಜನರಿಗೆ ಜೀವಜಲ ಹಾಗೂ ಮೀನುಗಾರಿಕೆಗೆ ಅನುಕೂಲವಾಗಿತ್ತು ಎಂದರು.
ಶಾಲ್ಮಲಾ ನದಿಯಿಂದ ಸೋಮೇಶ್ವರ ಕೆರೆ , ನುಗ್ಗೆಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು.
ಈಗಾಗಲೇ ಬಿರು ಬೇಸಿಗೆ ಆರಂಭಗೊಂಡಿದ್ದು, ಸೋಮೇಶ್ವರದ ಇಡೀ ಕೆರೆಯ ನೀರನ್ನು ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಪೋಲು ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಕಿಡಿಕಾರಿದರು.
ಹುಬ್ಬಳ್ಳಿಯ ಉಣಕಲ್ ಕೆರೆ, ಕೆಲಗೇರಿ ಸೇರಿದಂತೆ ಎಲ್ಲಾ ಕೆರೆಯಲ್ಲಿ ಅಂತರಗಂತೆ ಕಸ ಬೆಳೆದಿದೆ. ಹಾಗಂತ ಹು – ಧಾ ಮಹಾನಗರ ಪಾಲಿಕೆ ಸ್ವಚ್ಛಗೊಳಿಸುವಾಗ ನೀರನ್ನೂ ಪೋಲುಗೊಳಿಸಿಲ್ಲ. ಆದರೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಯಂತ್ರೋಪಕರಣಗಳ ಬಳಕೆ ಮಾಡದೆ ಶಾಲ್ಮಲಾ ನದಿಯ ಉಗಮ ಸ್ಥಾನದಿಂದ ಹುಟ್ಟಿರುವ ಸೋಮೇಶ್ವರ ಕೆರೆಯ ಬರಿದು ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಗುತ್ತಿಗೆದಾರ ಅನ್ವರ್ ಸ್ವಲ್ಪವೇ ನೀರನ್ನು ಬಿಟ್ಟಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ಅವರನ್ನು ಕಪ್ಪು ಪಟ್ಟಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಶತ 85 % ನೀರನ್ನು ಪೋಲು ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ನೀರು ಕಾಲಿ ಮಾಡುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಹಾಗೂ ಜಲಜೀವಿಗಳು , ಮೀನುಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಸ್ಥಿತಿ ಎಂಥಹವರ ಕಲ್ಲು ಹೃದಯವನ್ನೂ ಕರಗಿಸುವಂತೆ ಭಾಸವಾಗುತ್ತದೆ ಎಂದು ನೋವು ತೋಡಿಕೊಂಡರು.
ಲಕ್ಷಾಂತರ ರೂ,ಗಳ ವೆಚ್ಚದಲ್ಲಿ ಕೈಗೊಂಡ ಈ ಜನೋಪಯೋಗಿ ಯೋಜನೆ ಪರಿಸರ ಪ್ರೇಮಿ ದೃಷ್ಟಿಯನ್ನು ಒಳಗೊಂಡಿರಬೇಕು
ಸಾರ್ವಜನಿಕರಿಗೆ ಜನ , ಪ್ರಾಣಿ , ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ಕಂಟಕವಾಗಿರುವ ಈ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ಹೋರಾಡಲು ಸೋಮೇಶ್ವರ ಕೆರೆ ಉಳಿಸಿ , ಶಾಲ್ಮಲಾ ನದಿಯ ಸಾರ್ಥಕತೆಯನ್ನು ಕಾಪಾಡಿ ” ಎಂಬ ಘೋಷವಾಕ್ಯದೊಂದಿಗೆ ಜಯ ಕರ್ನಾಟಕ ಸಂಘಟನೆ ಜಾಗೃತಿ ಜಾಥಾವನ್ನು ಸೋಮೇಶ್ವರ ಕೆರೆಯಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪಾದಯಾತ್ರೆಯನ್ನು ಮಾಡಿ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಯ ಕನಾ೯ಟಕ ಸಂಘಟನೆಯ ಲಕ್ಷ್ಮಣ ದೋಡಮನಿ,ಚಂದ್ರು ಅಂಗಡಿ,ಮಂಜುನಾಥ ಸುತಗಟ್ಟಿ, ಎಮ್ ಎನ್ ಮಲ್ಲೂರ ಇನ್ನಿತರರು ಉಪಸ್ಥಿತರಿದ್ದರು.