ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯ ಮಾದನಬಾವಿ, ಬೋಗೂರು ಅತ್ಯಾಚಾರ ಪ್ರಕರಣಗಳು ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮದ ಅಪ್ರಾಪ್ತೆಯ ಮೇಲೆ ನಡೆದಿರುವ ಪ್ರಕರಣ ಇದಾಗಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ 13 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ನಡೆಸಲಾಗಿದೆ. ಅದೇ ಗ್ರಾಮದ ಸಂತೋಷ ಮಂಟೂರ (22) ಈ ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ ಎಂದು ಪೋಷಕರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆ. 4ರಂದು ಈ ಘಟನೆ ನಡೆದಿದ್ದರೂ ಬಾಲಕಿ ತಂದೆ ಊರಲ್ಲಿ ಇರದ ಕಾರಣ ದೂರು ನೀಡಲು ವಿಳಂಬವಾಗಿತ್ತು. ಶನಿವಾರ ತಡರಾತ್ರಿ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಷಕರು ಆತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಧಾರವಾಡ ಮಹಿಳಾ ಠಾಣೆ ಪೊಲೀಸರು ಭಾನುವಾರ ಆರೋಪಿ ಸಂತೋಷ ಮಂಟೂರನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.