ಧಾರವಾಡ ಪ್ರಜಾಕಿರಣ.ಕಾಮ್ : ಮುಸ್ಲಿಂ ಸಮಾಜ ವಿನಯ ಕುಲಕರ್ಣಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ವಿಜಯಪುರ ಹಾಶಂಪೀರ ದರ್ಗಾದ ಪೀಠಾಧ್ಯಕ್ಷ ಡಾ. ಸಯ್ಯದ್ ಮುರ್ತುಜಾ ಹುಸೇನಿ ಉರ್ಫ್ ಮುರ್ಷದ್ ಪೀರ ಹೇಳಿಕೆ ನೀಡಿದ್ದು ಖಂಡನೀಯ ಎಂದು ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಜಮಾದಾರ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಯ ಕುಲಕರ್ಣಿ ಅವರ ಜನ್ಮದಿನದ ನಿಮಿತ್ತ ಕಿತ್ತೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಾಶಂಪೀರ ದರ್ಗಾದ ಪೀಠಾಧ್ಯಕ್ಷರು ವಿನಯ ಪರ ಮತಹಾಕುವಂತೆ ಹೇಳಿದ್ದು ಖಂಡನೀಯ.
ಇನ್ನೂ ವಿನಯ ಕುಲಕರ್ಣಿಗೆ ಟಿಕೇಟ್ ಸಿಕ್ಕಿಲ್ಲ. ಯಾವ ಉದ್ದೇಶಕ್ಕೆ ಅವರು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.
ಧರ್ಮಗುರುಗಳು ರಾಜಕಾರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಯಾರಿಗೆ ಮತ ಹಾಕಬೇಕೆಂದು ಗೊತ್ತಿದೆ.
ಧರ್ಮಗುರುಗಳು ಹೇಳುವ ಅವಶ್ಯಕತೆಯಿಲ್ಲ. ವ್ಯಕ್ತಿಯ ಹಿನ್ನೆಲೆ ನೋಡಿ ಮತ ಹಾಕುತ್ತಾರೆ. ಯಾವ ವ್ಯಕ್ತಿ ಜಾತ್ಯಾತೀತ ಇದ್ದಾರೋ ಅವರಿಗೆ ಮುಸಲ್ಮಾನರು ಮತ ಹಾಕುತ್ತಾರೆ ಎಂದು ತಿಳಿಸಿದರು.
ಮುಸಲ್ಮಾನರ ಬಗ್ಗೆ ಸದಾ ದ್ವೇಷ ಭಾವನೆಯಿಂದ ಮಾತನಾಡುವ ಬಸನಗೌಡ ಪಾಟೀಲ ಯತ್ನಾಳ ಒಂದು ವೇಳೆ ಕಾಂಗ್ರೆಸ್ಗೆ ಬಂದರೆ ಅವರಿಗೆ ಮತ ಹಾಕಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ನಜೀರ್ ಮನಿಯಾರ, ಶಕೀಲ್ ತಮಟಗಾರ ಮೊದಲಾದವರಿದ್ದರು.