ಧಾರವಾಡ prajakiran.com : ಹಿಜಾಬ್ ನಿಷೇಧಿಸಿ ಸರಕಾರ ಹೊರಡಿಸಿರುವ ಆದೇಶ ವಿರೋಧಿಸಿ ಇಲ್ಲಿನ ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿಜಾಬ್ ಧಾರಣೆ ಪವಿತ್ರ ಕುರಾನ್ ದಲ್ಲಿ ಸೂಚಿಸಿರುವ ಅಗತ್ಯ ಧಾರ್ಮಿಕ ಕ್ರಮವಾಗಿದೆ.ಹಿಜಾಬ್ ಧರಿಸಿ,ಅನ್ಯ ಧರ್ಮ ಗೌರವಿಸಿ ಮೌನವಾಗಿ ಧಾರ್ಮಿಕ ನಂಬಿಕೆಯನ್ನು ಆಚರಿಸುವ ಪದ್ಧತಿ ಸಾವಿರಾರು ವರ್ಷಗಳಿಂದ ಜಾರಿಯಲ್ಲಿದೆ. ಪ್ರವಾದಿ ಮಹಮ್ಮದರ ಕಾಲದಿಂದಲೂ ನಡೆದು ಬಂದಿದೆ.
ಜೊತೆಗೆ ಹಿಜಾಬ್ ಧಾರಣೆ ಭಾರತೀಯ ಸಂವಿಧಾನದ 19(1)
ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ.
ಆದರೆ ಅಲ್ಪಸಂಖ್ಯಾತ ಮುಸ್ಲಿಂರ ಏಳ್ಗೆ ಸಹಿಸದ ಕೆಲವು ಸಂಘಟನೆಗಳು ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ,ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತ ದ್ವೇಷ ಬಿತ್ತುತ್ತಿವೆ. ಈ ಮೂಲಕ ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ.
ಶಿಕ್ಷಣ ಕ್ಷೇತ್ರದ ಮತ್ತು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ
ಹಿತದೃಷ್ಟಿಯಿಂದ ಶಾಂತಿ ಕದಡುವ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು. ಈ ಮುಖಾಂತರ ರಾಜ್ಯದಲ್ಲಿ ಶಾಂತಿ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಸಮಾಜದ ಮುಖಂಡ ಮೊಹಮ್ಮದ ಇಸ್ಮಾಯಿಲ್ ತಮಟಗಾರ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಜಮಾದಾರ, ಉಪಾಧ್ಯಕ್ಷ ಅಶ್ಪಾಕ ಬೆಟಗೇರಿ, ಕಾರ್ಯದರ್ಶಿ ನಜೀರಹುಸೇನ
ಮನಿಯಾರ, ಜಂಟಿ ಕಾರ್ಯದರ್ಶಿ ಶಕೀಲ ತಮಟಗಾರ, ಮುಖಂಡರಾದ ಖಲೀಲ ದಾಸನಕೊಪ್ಪ, ಇಕ್ಬಾಲ್ ಲಗದಗ, ಬಶೀರ ಅಹ್ಮದ ಹಾಲಬಾವಿ, ಬಶೀರ ಅಹ್ಮದ ಜಾಗೀರದಾರ, ರಫೀಕ ಅಹ್ಮದ ಬಿಸ್ತಿ, ಗೌಸ ಜಮಾದಾರ, ಸಲೀಂ ಕರಡಿಗುಡ್ಡ, ಹನೀಫ್ ಮುನವಳ್ಳಿ, ಅಲೀಮ ಅಹ್ಮದ ಸಂಗ್ರೇಶಕೊಪ್ಪ, ಬಶೀರ ಗಜೇಂದ್ರಗಡ, ಅತೀಕ ಅಹಮ್ಮದ ಸಂಗ್ರೇಸಕೊಪ್ಪ, ಮಜೀದಖಾನ ಕಿತ್ತೂರ, ಗುಲ್ಜಾರ ಮೊರಬ, ದಾದಾಪೀರ ಕೊಟಗಿ, ಶಬ್ಬೀರ ಬಾಳೆಕುಂದ್ರಿ, ಆಡಳಿತ ಮಂಡಳಿಯ ಸದಸ್ಯರು, ಸಮುದಾಯದ ಮುಖ್ಯಸ್ಥರು, ಉಪಸ್ಥಿತರಿದ್ದರು.