ಬಾಗಲಕೋಟೆ prajakiran.com : ತಮ್ಮ ಪ್ರವಚನದ ಮೂಲಕ ನಾಡಿನ ಮನೆ ಮಾತಾಗಿದ್ದ ಕೋಮು ಸೌಹಾರ್ದತೆಯ ಹರಿಕಾರ ಹಾಗೂ ಕನ್ನಡದ ಕಬೀರ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ ಅವರು ಕೊನೆಯುಸಿರೆಳೆದಿದ್ದಾರೆ.
ಸುತಾರ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿಯುತ್ತಿದೆ.
ಇಬ್ರಾಹಿಂ ಸುತಾರ ಅವರು 1940ರಲ್ಲಿ ಅಮೀನಾಬಿ ಹಾಗೂ ನಬೀಸಾಬ ದಂಪತಿಗಳ ಉದರದಲ್ಲಿ ಜನಿಸಿದ್ದರು. ನೇಕಾರಿಕೆ ಕುಟುಂಬದಲ್ಲಿ ಜನಿಸಿದ ಅವರು ಮೂರನೇ ತರಗತಿಯ ವರೆಗೆ ಓದಿದ್ದರು. ಕುರಾನ್, ಭಗವದ್ಗೀತೆ ಹಾಗೂ ಶರಣರ ವಚನಗಳನ್ನು ಅರಿತುಕೊಂಡು ದೇವ ಹಲವು ನಾಮ ಒಂದೇ ಎಂದು ಸಾರಿದರು.
ಶರಣರ ವಚನ, ಆಶಯಗಳು ಹಾಗೂ ಸೂಫಿ ಪರಂಪರೆಯನ್ನು ತಮ್ಮ ಆಧ್ಯಾತ್ಮಿಕ ಪ್ರವಚನದ ಮೂಲಕ ಉಣಬಡಿಸಿ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದರು.
ನಾಡಿನೆಲ್ಲೆಡೆ ಸಾವಿರಾರು ಪ್ರವಚನಗಳನ್ನು ನಡೆಸಿಕೊಟ್ಟು ಜನಮನದ ಗಮನ ಸೆಳೆದಿದ್ದರು.
ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿತ್ತು. ಅವರನ್ನು “ಕನ್ನಡದ ಕಬೀರ” ಎಂದು ಜನ ಗುರುತಿಸುತ್ತಿದ್ದರು. ಅವರಿಗೆ 1995 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2018 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸಂದಿವೆ.