ಧಾರವಾಡ prajakiran.com : ರಾಷ್ಟ್ರೀಯ ಹೆದ್ದಾರಿ-4 ರ ಹುಬ್ಬಳ್ಳಿ-ಧಾರವಾಡ ಬೈಪಾಸ್ ದಶಪಥ ರಸ್ತೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ಮತ್ತು 1200 ಕೋಟಿ ಕಾಮಗಾರಿಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು
ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ , ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೈಪಾಸ್ ರಸ್ತೆಯಲ್ಲಿ ಈವರೆಗೆ ಸಾವಿರಾರು ಸಾವು-ನೋವು ಸಂಭವಿಸಿವೆ.
ಹಲವು ಬಾರಿ ಸಾರ್ವಜನಿಕರ, ಸಂಘ-ಸಂಸ್ಥೆಗಳ ಮುಖಂಡರ ಹೋರಾಟ ಮತ್ತು ಸರಕಾರದ ಮೇಲೆ ಒತ್ತಡ ತಂದ ಬಳಿಕ ಇದೀಗ ಕೇಂದ್ರ ಸರಕಾರ ದಶಪಥ ನಿರ್ಮಾಣಕ್ಕೆ ಮುಂದಾಗಿದೆ.
ಈ ಕಾಮಗಾರಿಗೆ 30 ತಿಂಗಳು ಎಂದು ನಿಗದಿ ಮಾಡಿದೆ. ಜೊತೆಗೆ ಮುಂದಿನ 5 ವರ್ಷಗಳವರೆಗೆ ನಿರ್ವಹಣೆ ಯ ಹೊಣೆಯನ್ನು ಗುತ್ತಿಗೆದಾರರಿಗೆ ವಹಿಸಲಿದೆ.
ಈ ಕಾಮಗಾರಿಗೆ 1200 ಕೋ.ರೂ. ಅನುದಾನ ನೀಡಿದೆ. ಉದ್ದೇಶಿತ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣವಾಗಬೇಕು.
ಮತ್ತು ಕಾಮಗಾರಿ ಸಂಪೂರ್ಣ ಪಾರದರ್ಶಕ ಆಗಬೇಕು. ಈ ಕಾಮಗಾರಿಯಲ್ಲಿ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿ ಕಮೀಶನ್ ಪಡೆಯುವ ಸಾಧ್ಯತೆ ಇದ್ದು, ಸರಕಾರ ಈ ಬಗ್ಗೆ ನಿಗಾವಹಿಸಬೇಕು.
ಈ ಭಾಗದ ಸಂಸದರು ಆದ ಪ್ರಹ್ಲಾದ ಜೋಶಿ ಅವರು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ನಿರ್ವಹಣೆಯಲ್ಲಿ
ಸೇವಾ ರಸ್ತೆಯನ್ನು ನಿರ್ಮಿಸುವ ವರೆಗೆ ಟೋಲ್ ಶುಲ್ಕ ವಸೂಲು ನಿಲ್ಲಿಸಬೇಕು.
ನಂತರ ಸರಕಾರವೇ ಅನುದಾನ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಟೋಲ್ ಶುಲ್ಕ ವಸೂಲು ಮಾಡಬಾರದು.
ಹು-ಧಾ ಅವಳಿ ನಗರದ ಜನ ಕೂಡ ಟೋಲ್ ಶುಲ್ಕ ಪಾವತಿಸಬಾರದು ಎಂದು ಮನವಿ ಮಾಡಿದರು.
ಉದ್ದೇಶಿತ ಕಾಮಗಾರಿಯನ್ನು ಸಾರ್ವಜನಿಕರು ಗಮನಿಸಬೇಕು. ಯಾವುದೇ ಹಂತದಲ್ಲಿಯೂ ಕಾಮಗಾರಿ ತನ್ನ ಉದ್ದೇಶ ಈಡೇರಿಸುವಂತಾಗಬೇಕು.
ಜೊತೆಗೆ ದಶಪಥ ನಿರ್ಮಾಣ ಹಂತದಲ್ಲಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಇನ್ನಷ್ಟು ಸಂಪೂರ್ಣ ಸೌಕರ್ಯಗಳನ್ನು ಒದಗಿಸಬೇಕು ಎಂದು ನೀರಲಕೇರಿ ಮನವಿ ಮಾಡಿದರು.
ಮಾಜಿ ಮೇಯರ ದಾನಪ್ಪ ಕಬ್ಬೇರ, ನಾಗರಾಜ ಕಿರಣಗಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.