ನೂತನ ಅಪರ ಆಯುಕ್ತರಾಗಿ ಸಿದ್ರಾಮಪ್ಪ ಬಿರಾದಾರ ಅಧಿಕಾರ ಸ್ವೀಕಾರ
ಧಾರವಾಡ prajakiran.com : ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ ಸೇರಿ ಎಳು ಕಂದಾಯ ಜಿಲ್ಲೆ ಹಾಗೂ ಶಿರಸಿ, ಚಿಕ್ಕೋಡಿ ಸೇರಿ ಒಂಬತ್ತು ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಕೊನೆಗೂ ನಿರೀಕ್ಷೆಯಂತೆ ವರ್ಗಾವಣೆ ಆಗಿದ್ದಾರೆ.
ಅವರನ್ನು ಈ ಹಿಂದೆ ಕೂಡ ವರ್ಗಾವಣೆ ಮಾಡಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ರದ್ದಾಗಿ ಮುಂದುವರೆಸಲಾಗಿತ್ತು. ಇದೀಗ ಮತ್ತೆ ವರ್ಗಾವಣೆ ಮಾಡಲಾಗಿದೆ.
ಅವರ ಸ್ಥಾನಕ್ಕೆ ಸ್ಥಳ ನಿರೀಕ್ಷೆಯಲ್ಲಿ ಇದ್ದ ಹಿರಿಯ ಕೆ ಎ ಎಸ್ ಅಧಿಕಾರಿ ಸಿದ್ರಾಮಪ್ಪ ಶ್ರೀಶೈಲ ಬಿರಾದಾರ ಅವರನ್ನು ನಿಯುಕ್ತ ಮಾಡಿ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.
ಮಂಗಳವಾರವೇ ಸಿದ್ರಾಮಪ್ಪ ಶ್ರೀಶೈಲ ಬಿರಾದಾರ ಅವರು ದಿಢೀರ್ ಆಗಿ ಬಂದು ಯಾವುದೇ ಸದ್ದು ಗದ್ದಲವಿಲ್ಲದೆ ಅಧಿಕಾರ ಸ್ವೀಕರಿಸಿ ಸರಳತೆ ಮೆರೆದರು.
ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅನೇಕ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಶುಭ ಕೋರಿದರು.