ಕೋವಿಡ್-19ರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಉಪನಿರ್ದೇಶಕರ ಸೂಚನೆ
ಧಾರವಾಡ prajakiran.com : ಜಿಲ್ಲೆಯಲ್ಲಿ ಎಲ್ಲ ಪದವಿ ಪೂರ್ವ ಮಾಹಾವಿದ್ಯಾಲಯಗಳಲ್ಲಿ ಫೆಬ್ರವರಿ 1 ರಿಂದ ಪ್ರಥಮ ಪಿಯುಸಿ (ಭೌತಿಕ) ತರಗತಿಗಳು ಆರಂಭಿಸಲು ಸರ್ಕಾರವು ಆದೇಶ ನೀಡಿದ್ದು, ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿರುವ ಎಸ್.ಓ.ಪಿ.ಯನ್ನು ಕಡ್ಡಾಯವಾಗಿ ಪಾಲಿಸಿ ಪ್ರಥಮ ಹಾಗೂ ದ್ವೀತಿಯ ಪಿಯುಸಿ ತರಗತಿಗಳನ್ನು ಪೂರ್ಣ ಅವಧಿಗೆ ನಡೆಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಚಿದಂಬರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತರಗತಿಗಳಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಮತ್ತು ಕಾಲೇಜುಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಜರ್ ಹಾಗೂ ಥರ್ಮಲ್ಸ್ಕ್ಯಾನರ್ ಬಳಕೆ ಮಾಡಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿ ಪಿಯುಸಿ ಪ್ರಥಮ ಹಾಗೂ ದ್ವೀತಿಯ ತರಗತಿಗಳನ್ನು ಏಕಕಾಲದಲ್ಲಿ ನಡೆಸಲು ಸೂಕ್ತ ಕ್ರಮಕೈಗೊಳ್ಳಲು ಕಾಲೇಜುಗಳ ಪ್ರಾಂಶುಪಾಲರಿಗೆ ಅವರು ತಿಳಿಸಿದ್ದಾರೆ.
ತರಗತಿಗಳಲ್ಲಿ ಹಾಗೂ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗುಂಪುಗೂಡಬಾರದು,.
ವಿಧ್ಯಾರ್ಥಿಗಳು ಧನಾತ್ಮಕ ಮನೋಭಾವನೆಯಿಂದ ಕಾಲೇಜುಗಳಿಗೆ ಬರಲು ಮುಕ್ತ ವಾತಾವರಣ ಕಲ್ಪಿಸಬೇಕು.
ಪೋಷಕರು ಆತ್ಮವಿಶ್ವಾಸದಿಂದ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಅನುಕೂಲವಾಗುವಂತೆ ಸೂಕ್ತ ತಿಳುವಳಿಕೆ, ಕೈಗೊಂಡ ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಬೇಕು.
ಪ್ರತಿ ಕಾಲೇಜಿನಿಂದ ಒಬ್ಬ ಉಪನ್ಯಾಸಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಪ್ರತಿನಿತ್ಯ ಕೋವಿಡ್-19ರ ನಿಯಮ ಅನುಷ್ಠಾನ ಹಾಗೂ ಪ್ರಕರಣಗಳ ಬಗ್ಗೆ ಸಂಪೂರ್ಣ ವರದಿಯನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ಅವರು ತಿಳಿಸಿದ್ದಾರೆ.