ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಗುರುವಾರ ದಿನವಿಡಿ ಕಾಂಗ್ರೆಸ್ ಮುಖಂಡರ ವಿಚಾರಣೆ ನಡೆಸಿತು.
ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಯೋಗೀಶಗೌಡ ಪತ್ನಿ ಮಲ್ಲಮ್ಮ ಅವರನ್ನು ಸಿಬಿಐ ಅಧಿಕಾರಿಗಳು ಸತತ ಆರು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ಮೊದಲು ಪ್ರತ್ಯೇಕ ಹಾಗೂ ಆನಂತರ ಒಟ್ಟಿಗೆ ವಿಚಾರಣೆ ನಡೆಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಡ್ರಿಲ್ ನಡೆಸಿದ ಸಿಬಿಐ ಅಧಿಕಾರಿಗಳು, ಯೋಗೀಶಗೌಡ ಪತ್ನಿ ಮಲ್ಲಮ್ಮ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರಗೆ ಸತತ ಆರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರೆ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ 7 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದರು.
ಹಲವು ಗಂಟೆಗಳ ಕಾಲ ನಡೆದ ಸಿಬಿಐ ವಿಚಾರಣೆ ವೇಳೆ ಮಹತ್ವದ ಅಂಶಗಳು ಬೆಳಕಿಗೆ ಬಂದಿದ್ದು, ಇವರ ಹೇಳಿಕೆ ಆಧರಿಸಿ ಇನ್ನಷ್ಟು ಪ್ರಮುಖರ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಪ್ರಜಾಕಿರಣ.ಕಾಮ್ ಗೆ ಉನ್ನತ ಮೂಲಗಳು ಖಚಿತಪಡಿಸಿವೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಬಿಐ ಎದುರು ಧಾರವಾಡ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡರು ಹಾಗೂ ಯೋಗೀಶಗೌಡ ಪತ್ನಿ ಮಲ್ಲಮ್ಮ ಜೊತೆಗೆ ರಾಜಿ ಸಂಧಾನ ಸಭೆ ನಡೆಸಿದ್ದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವುದಾಗಿ ತಿಳಿಸಿದರು.
ಬಳಿಕ ಹೊರ ಬಂದ ಯೋಗೀಶಗೌಡ ಪತ್ನಿ ಮಲ್ಲಮ್ಮ ವಿಚಾರಣೆ ಕುರಿತು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು. ಅಲ್ಲದೆ, ಸಿಬಿಐಗೆ ಹೇಳಿಕೆ ನೀಡಲು ಆಗಮಿಸಿದ್ದು, ಹೇಳಿಕೆ ನೀಡಿದ್ದೇನೆ ಎಂದಷ್ಟೇ ಸ್ಪಷ್ಟಪಡಿಸಿದರು.
ಇದಾದ ಬಳಿಕ ಹೊರ ಬಂದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅಂದು ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದರು. ಹೀಗಾಗಿ ಅವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಮಾಜಿ ಸಚಿವರ ಗಮನಕ್ಕೆ ಕೂಡ ತರಲಾಗಿತ್ತು. ನಮ್ಮ ಮನೆಯಲ್ಲಿಯೇ ಈ ಮಾತುಕತೆ ನಡೆದಿದ್ದು, ಅದರಲ್ಲೂ ಅವರು ಭಾಗವಹಿಸಿದ್ದರು ಎಂದು ವಿವರಿಸಿದರು.
ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆಅವರು ಮುಂದಿಟ್ಟ ಹಲವು ಪ್ರಶ್ನೆಗಳಿಗೆ ಮೂವರು ತಬ್ಬಿಬ್ಬು ಆಗಿದ್ದರು. ಅಲ್ಲದೆ, ಕೆಲ ಕಾಲ ಕಕ್ಕಾಬಿಕ್ಕಿಯಾಗಿ ಸುಧಾರಿಸಿಕೊಳ್ಳಲು ಹೆಣಗಾಡಿದರು.
ಇದೇ ವೇಳೆ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಸೇರಿದಂತೆ ಹಲವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಸತತ ಡ್ರಿಲಿಂಗ್ ಬಳಿಕ ಕೊನೆಗು ರಾಜಿ ಸಂಧಾನದ ಕುರಿತು ಮಹತ್ವದಅಂಶಗಳನ್ನು ಬಿಚ್ಚಿಟ್ಟಿರುವುದು ಪ್ರಭಾವಿ ರಾಜಕಾರಣಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.