ಧಾರವಾಡ prajakiran.com : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಅಪರಾಧಿಯೊಬ್ಬನಿಗೆ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ೩ ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.
೨೦೧೭ರ ನ. ೧೧ರಂದು ಧಾರವಾಡ-ಸವದತ್ತಿ ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಧಾರವಾಡ ಶಹರ ಠಾಣೆ ಪೊಲೀಸರು ದಾಳಿ ನಡೆಸಿದ್ದರು.
ಧಾರವಾಡದ ಸವದತ್ತಿ ರಸ್ತೆಯ ಕವಲಗೇರಿ ಕ್ರಾಸ್ ಹತ್ತಿರ ಕಾರನ್ನು ತಡೆದು ಜಪ್ತಿ ಮಾಡಿದಾಗ ೧ ಕೆ.ಜಿ. ೩೭೦ ಗ್ರಾಂ. ಗಾಂಜಾ ಪತ್ತೆಯಾಗಿತ್ತು.
ಈ ವೇಳೆ ಕಾರ್ ಚಾಲಕನಾಗಿದ್ದ ಮಹಾರಾಷ್ಟ್ರಮೂಲದ ರಸೂಲಿ ಸರ್ಜಾತ ಜಾಕಿ ಎಂಬಾತನನ್ನು ಬಂಧಿಸಲಾಗಿತ್ತು.
ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಶಹರ ಠಾಣೆ ಪೊಲೀಸರು, ತನಿಖೆ ಮಾಡಿ, ಮತ್ತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಅದರಂತೆ ಪ್ರಕರಣದ ವಿಚಾರಣೆ ಮಾಡಿದ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಉಮೇಶ ಎಂ. ಅಡಿಗ ಅವರು, ಪೊಲೀಸರು ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿ ಪರಿಶೀಲಿಸಿ, ೧ನೇ ಆರೋಪಿ ರಸೂಲ ಜಾಕಿಗೆ ೩ ವರ್ಷ ಕಠಿಣ ಶಿಕ್ಷೆ ಹಾಗೂ ೫ ಸಾವಿರ ರೂ. ದಂಡ ವಿಧಿಸಿದರು.
ಅಲ್ಲದೆ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ೧೫ ದಿನ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು ಉಳಿದ ಇಬ್ಬರು ಪ್ರಕರಣದಲ್ಲಿ ಅವರ ಪಾತ್ರ ಕಂಡು ಬಂದಿಲ್ಲ ಎಂದು ಅಭಿಪ್ರಾಯಪಟ್ಟು ಕೈಬಿಡಲಾಗಿದೆ.
ಸರಕಾರದ ಪರವಾಗಿ ಪ್ರಧಾನ ಅಭಿಯೋಜಕ ಡಿ.ಎ. ಭಾಂಡೆಕರ್ ವಾದ ಮಂಡಿಸಿದರು.
ತಪ್ಪಿಸಿಕೊಂಡು ಹೊರಟಿದ್ದ :
ಧಾರವಾಡ ಶಹರ ಠಾಣೆ ಪೊಲೀಸರು, ಸವದತ್ತಿ ರಸ್ತೆಯ ಕವಲಗೇರಿ ಕ್ರಾಸ್ ಹತ್ತಿರ ಕಾರನ್ನು ತಡೆಯಲು ಪೊಲೀಸರು ಮುಂದಾದಾಗ ಆರೋಪಿ ರಸೂಲ್ ಜಾಕಿ ತಪ್ಪಿಸಿಕೊಳ್ಳನ್ನು ಕಾರನ್ನು ಪೊಲೀಸರು ಅಡ್ಡ ಇಟ್ಟಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ.
ಪೊಲೀಸರ ಸಮಯ ಪ್ರಜ್ಞೆಯಿಂದ ತಕ್ಷಣ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅಂದಿನ ಇನ್ಸಪೆಕ್ಟರ್ ಗಿರೀಶ ಭೋಜನವರ ನೇತೃತ್ವದ ತಂಡ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಪಾರೋಪಪಟ್ಟಿ ಸಲ್ಲಿಸಿದ್ದರು.