ಹಾಸನ prajakiran.com : ಬೋರವೆಲ್ ಸಪೋರ್ಟ್ ಲಾರಿಯೊಂದು ಮನೆಯೊಳಗೆ ನುಗ್ಗಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನದ ನುಗ್ಗೇಹಳ್ಳಿ ಸಮೀಪದ ಮುಳ್ಳಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತಮಿಳುನಾಡು ಮೂಲದ ರಾಜು ವೆಲ್ (42) ಎಂಬಾತನೇ ಮೃತ ಲಾರಿ ಚಾಲಕ ಎಂದು ತಿಳಿದುಬಂದಿದೆ. ಅಕ್ಕನಹಳ್ಳಿ ಕೂಡಿನಿಂದ ಹೊರಟಿದ್ದ ಲಾರಿ ಚಾಲಕ ವಾಹನವನ್ನು ಎಡಕ್ಕೆ ತಿರುಗಿಸುವ ಬದಲು ಮನೆಯೊಳಗೆ ನುಗಿದ್ದ. ಇದರಿಂದಾಗಿ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಗ್ರಾಮ ಪಂಚಾಯತಿ ಸದಸ್ಯೆ ರೂಪಾ ಚೇತನ್ ಅವರ ಮನೆಯೊಳಗೆ ಲಾರಿ ಪ್ರವೇಶಿಸಿದೆ. ಘಟನೆಯಲ್ಲಿ ಮನೆ ಮುಂಭಾಗದ ಛಾವಣಿ ಸಂಪೂರ್ಣ ಕುಸಿದಿದೆ.
ಘಟನಾ ಸ್ಥಳಕ್ಕೆ ನುಗ್ಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹವನ್ನು ಸ್ಥಳೀಯರ ನೆರವಿನೊಂದಿಗೆ ಹೊರ ತೆಗೆದರು. ಆನಂತರ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಗೆ ಶವ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.