ಧಾರವಾಡ prajakiran.com : ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಧಾರವಾಡದ ಉಪನಗರ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಘಟನೆ ನಡೆದ 24 ಗಂಟೆಗಳಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಾಗರಾಜ ಹೊಂಗಣ್ಣವರ, ಆದರ್ಶ ನಾಯಕ, ವಿರೇಶ ಸೊಟ್ಟನಾಳ, ಭರತ ಕರೆಣ್ಣವರ, ದತ್ತು ಅಲಿಯಾಸ್ ಸಂಗಮೇಶ ಕಮಾಟಿ ಹಾಗೂ ವಿನಾಯಕ ಕಲಬುರಗಿ ಎಂದು ಗುರುತಿಸಲಾಗಿದೆ.
ಇವರ ವಿರುದ್ದ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ, 147, 148, 323, 324, 307, 504, 506, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ ದೂರು ದಾಖಲಾಗಿತ್ತು.
ಪ್ರಕರಣದ ವಿವರ :
ಧಾರವಾಡದ ಎತ್ತಿನಗುಡ್ಡ ನಿವಾಸಿಗಳಾದ ಉದಯ ಕೆಲಗೇರಿ, ಮನೋಜ ಜಮನಾಳ, ಹಾಗೂ ಸುರೇಶ ಅವರಾದಿ ಪಿಯುಸಿ ವಿಜ್ಞಾನ ಹಾಗೂ ಪ್ಯಾರಾಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳೇ ಬೆಳಗ್ಗೆ ಮದಾರಮಡ್ಡಿ ಬಳಿಯ ಮೈದಾನದಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದರು.
ಆನಂತರ ಸಂಜೆ ಈ ಮೂವರನ್ನು ಕರೆದ ನಾಗರಾಜ ಹೊಂಗಣ್ಣವರ, ಆದರ್ಶ ನಾಯಕ, ವಿರೇಶ ಸೊಟ್ಟನಾಳ, ಭರತ ಕರೆಣ್ಣವರ, ದತ್ತು ಅಲಿಯಾಸ್ ಸಂಗಮೇಶ ಕಮಾಟಿ ಹಾಗೂ ವಿನಾಯಕ ಕಲಬುರಗಿ ಧಾರವಾಡದ ಸಪ್ತಾಪುರ ಸರ್ಕಲ್ ಬಳಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಮೂವರು ಇನಸ್ಟಾಗ್ರಾಂನಲ್ಲಿ ತಮ್ಮ ತಾಯಿಗೆ ಅವಹೇಳನ ಮಾಡಿದ್ದಾರೆಂದು ಹಾಗೂ ಸಣ್ಣಪುಟ್ಟ ಹಣಕಾಸಿನ ವ್ಯವಹಾರ ಹಿನ್ನಲೆಯಲ್ಲಿಮಾತಿಗೆ ಮಾತು ಬೆಳೆದು ಗಲಾಟೆ ಚಾಕು ಇರಿತದವರೆಗೂ ಬಂದು ನಿಂತಿತ್ತು.
ಇದರಿಂದಾಗಿ ಕುಪಿತಗೊಂಡ ಆರು ಜನ ಸ್ನೇಹಿತರು ಅವರ ಮೇಲೆ ಚಾಕು ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದರು.