ಧಾರವಾಡ prajakiran.com : ರಾಜ್ಯ ಸರಕಾರದ ವತಿಯಿಂದ ಬಡವರ ಹಸಿವು ನೀಗಿಸಲು ಉಚಿತವಾಗಿ ನೀಡುವ ಅನ್ನಭಾಗ್ಯದ 220 ಕ್ವಿಂಟಾಲ್ ಅಕ್ಕಿ ವಶ ಪಡಿಸಿಕೊಂಡ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಸೋಮವಾರ ಸಂಜೆ ನಡೆದಿದೆ.
ಧಾರವಾಡದಿಂದ ಮುಂಬೈ ಗೆ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಧಾರವಾಡದ ಉಪವಿಭಾಗಾಧಿಕಾರಿ ಮಹ್ಮದ ಜುಬೇರಅವರು ದಾಳಿ ನಡೆಸಿ ಲಾರಿಯನ್ನು ತಡೆದಿದ್ದಾರೆ.
ಈ ಲಾರಿ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಯಿಂದ ಈ ಅಕ್ಕಿಯನ್ನು ಸಾಗಿಸುತ್ತಿತ್ತು. ಈ ಕುರಿತು ದಾಖಲೆಗಳು ಲಭ್ಯವಾಗಿದೆ.
ಈ ಕುರಿತು ಪೊಲೀಸ್ ದೂರು ನೀಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಅನ್ನಭಾಗ್ಯದಅಕ್ಕಿ ಅಕ್ರಮ ಸಾಗಾಟ ಕಳೆದ ಹಲವು ವರ್ಷಗಳಿಂದ ರಾಜಾರೋಷವಾಗಿಯೇ ನಡೆದಿದ್ದು, ಇದರಲ್ಲಿ ಹಲವು ದೊಡ್ಡ ದೊಡ್ಡ ಕುಳಗಳೇ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.
ಆದರೂ ಧಾರವಾಡ ಜಿಲ್ಲಾಡಳಿತ ಈ ಅಕ್ರಮವನ್ನು ಬಯಲಿಗೆ ಎಳೆಯುವಲ್ಲಿ, ಅವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಧಾರವಾಡ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈವರೆಗೆ ಅಕ್ರಮ ಕುಳಗಳಿಗೆ ನೋಟಿಸ್ ನೀಡಿ ಬಿಸಿ ತಾಕಿಸುವಲ್ಲಿ ವಿಫಲವಾಗಿಯೇ ಎಂಬ ಪ್ರಶ್ನೆ ಎದುರಾಗಿದೆ.
ಈ ಹಿಂದೆ ಕೂಡ ಧಾರವಾಡದಿಂದ ಗಂಗಾವತಿಗೆ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸರಬರಾಜು ಆಗಿರುವುದರ ಹಿಂದೆ ಧಾರವಾಡದ ಹೆಸರು ಕೇಳಿಬಂದಿತ್ತು.
ಈಗಲಾದರೂ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸುತ್ತಾ ಎಂಬುದು ಕಾದು ನೋಡಬೇಕಿದೆ.