ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ರ್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಯನ್ನು ಶುಕ್ರವಾರವೂ ಮುಂದುವರೆಸಲಾಗಿದ್ದು, ಈ ವೇಳೆ ಪಾಸಿಟಿವ್ ಕಂಡು ಬಂದ 17ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಒಟ್ಟು ಮೂರು ತಂಡಗಳು ಕಾರ್ಯಾಚರಣೆ ನಡೆಸಿದ ಪರಿಣಾಮ ಧಾರವಾಡ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ನೂರಾರು ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ಅಂಗಡಿ, ವಾಣಿಜ್ಯ ಸಂಕೀರ್ಣ ಮತ್ತು ಬೀದಿಬದಿಯ ವ್ಯಾಪಾರಿಗಳು ರ್ಯಾಪಿಡ್ ಆ್ಯಂಟಿಜನ್ ಟೆಸ್ಟಗೆ ಸ್ವಯಂ ಪ್ರೇರಿತವಾಗಿ ಒಳಪಟ್ಟರೆ ಕೆಲವರು ಅಸಹಕಾರ ನೀಡಿ ತಮ್ಮ ಅಂಗಡಿಗಳನ್ನು ಮುಚ್ಚಿಕೊಂಡು ಮನೆಯತ್ತ ಹಾರಿದರು.
ಇದರಿಂದಾಗಿ ಮಾರ್ಕೇಟ್ ಪ್ರದೇಶದಲ್ಲಿ ಜನ ಹಾಗೂ ವ್ಯಾಪಾರಸ್ಥರು ಹೌಹಾರಿದರು. ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಪ್ರತಿ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ಪ್ರಯತ್ನಿಸಿದರು.
ರ್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದ ಅಂಗಡಿ, ವಾಣಿಜ್ಯ ಸಂಕೀರ್ಣಗಳನ್ನು ಸ್ಥಳದಲ್ಲಿಯೇ ಸೀಲ್ಡೌನ್ ಮಾಡಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಯಿತು.
ಅಲ್ಲದೆ, ಸೋಂಕು ಪಾಸಿಟಿವ್ ಬರುವ ವ್ಯಕ್ತಿಗಳನ್ನು ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು.
ಸಾರ್ವಜನಿಕರ ಹಾಗೂ ತಮ್ಮ, ತಮ್ಮ ಕುಟುಂಬ ಸದಸ್ಯರ ಆರೋಗ್ಯ ಹಿತದೃಷ್ಟಿಯಿಂದ ಪ್ರತಿ ಅಂಗಡಿ, ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳು ಅಸಹಕಾರ ತೊರದೇ ಸ್ವಯಂ ಪ್ರೇರಣೆಯಿಂದ ರ್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಗೆ ಒಳಪಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದು ಕಂಡು ಬಂತು.
ಧಾರವಾಡದಲ್ಲಿ ಶುಕ್ರವಾರ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 159 ಅಂಗಡಿಗಳ 283 ಜನರ ತಪಾಸಣೆಗೆ ಒಳಪಡಿಸಲಾಯಿತು.
ಈ ವೇಳೆ ಪಾಸಿಟಿವ್ ಕಂಡು ಬಂದ 22 ಜನರ 17 ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಯಿತು.