ಧಾರವಾಡ prajakiran.com : ಶಿಕ್ಷಕರ ವರ್ಗಾವಣೆ ಪ್ರಾರಂಭಿಸಲು ಆಗ್ರಹಿಸಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಭಿನ್ನ ಅಭಿಯಾನ ಆರಂಭಿಸಿದೆ.
ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಗ್ರಾಮೀಣ ಶಿಕ್ಷಕರ ಸಂಘಟನೆಯವತಿಯಿಂದ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಘಟಕಗಳ ಸಂಯೋಜನೆಯಲ್ಲಿ ಮನೆಯಿಂದಲೇ ಮನವಿ ಎಂಬ ವಿಶಿಷ್ಟ ಸಾಪ್ತಾಹಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಮುಖ್ಯ ಮಂತ್ರಿ, ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಯ ರಾಜ್ಯ ಹಂತದ ಅಧಿಕಾರಿಗಳಿಗೆ ಅತೀ ಶೀಘ್ರವಾಗಿ ಶಿಕ್ಷಕರ ವರ್ಗಾವಣೆ ಪ್ರಾರಂಭಿಸಲು ಈ ಅಭಿಯಾನ ಆರಂಭಿಸಲಾಗಿದೆ ಎಂದರು.
ಈ ಅಭಿಯಾನ ಮೇ ೨೯ ರಿಂದ ಜೂನ್ ೪ ರವರೆಗೆ ನಡೆಯಲಿದೆ. ಇದರಲ್ಲಿ ಸಂಘದ ರಾಜ್ಯ ಜಿಲ್ಲೆ ತಾಲೂಕಾ ಎಲ್ಲ ಹಂತದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಸಾಮಾನ್ಯ ಸದಸ್ಯರು ವರ್ಗಾವಣೆ ಅಪೇಕ್ಷಿತರು ಮನವಿ ಕಾರ್ಯಕ್ರಮವನ್ನು ಯಾವುದೇ ಮೂಲದಿಂದಾದರೂ ಮನವಿ ಮಾಡಬಹುದು.
ಶಿಕ್ಷಕರ ವರ್ಗಾವಣೆಗಾಗಿ ಪ್ರಾರಂಭಿಸುವಲ್ಲಿ ಸರ್ಕಾರದ ಗಮನ ಸೆಳೆಯುವ ಹೋರಾಟ ಯಶಸ್ವಿಗೊಳಿಸಬೇಕು ಎಂದು ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ.ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ, ಗೌರವ ಸಲಹೆಗಾರರಾದ ನಾಡೋಜ ಮಹೇಶ ಜೋಶಿ, ಉಪಾಧ್ಯಕ್ಷ ಎಮ್.ಆಯ್.ಮುನವಳ್ಳಿ, ನಾಗರಾಜು.ಕೆ.ಮುಂತಾದವರು ವಿನಂತಿಸಿದ್ದಾರೆ.