ಶಿವಾನಂದ ಶ್ರೀಶೈಲ ಬಿರಾದಾರ ಸಾಕ್ಷಿಯಾಗಲು ಒಪ್ಪಿಗೆ ನೀಡಿದ ಹೈಕೋರ್ಟ….!
ಬೆಂಗಳೂರು ಪ್ರಜಾಕಿರಣ.ಕಾಮ್ : ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿಯ ಬಿಜೆಪಿ ಸದಸ್ಯನಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ ತಪ್ಪೊಪ್ಪಿಗೆ ಸಾಕ್ಷಿಯಾಗಲು ಹೈಕೋರ್ಟ್ ಅನುಮತಿ ನೀಡಿದೆ.
ಹೌದು, ಇದು ಅಚ್ಚರಿ ಆದ್ರೂ ನಂಬಲೇಬೇಕಾದ ಕಟುಸತ್ಯ.
ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ ಸದರಿ ಕೊಲೆ ಪ್ರಕರಣದಲ್ಲಿ ತನ್ನನ್ನು ಅಪ್ರೂವರ್ ಆಗಲು,ಹೇಳಿಕೆ ದಾಖಲಿಸಲು ಅನುಮತಿ ನೀಡಲು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು
.ಆದರೆ ಸದರಿ ನ್ಯಾಯಾಲಯ 2022ರ ಜ. 14ರಂದು ಅವರ ಅರ್ಜಿ ತಿರಸ್ಕರಿಸಿ ಅನುಮತಿ ನಿರಾಕರಿಸಿತ್ತು.
ಅದರ ನಂತರ ಈ ನಿರಾಕರಣೆ ಪ್ರಶ್ನಿಸಿ ಶಿವಾನಂದ ಶ್ರೀಶೈಲ ಬಿರಾದಾರ ಹೈಕೋರ್ಟ್ ಮೆಟ್ಟಿಲು ಏರಿದ್ದರು.
ಇದಕ್ಕೆ ಹೈಕೋರ್ಟ್ ನ್ಯಾ.ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಇಂದು ಅವರನ್ನು ತಪ್ಪೊಪ್ಪಿಗೆ ಸಾಕ್ಷಿಯಾಗಲು ಒಪ್ಪಿಗೆ ಸೂಚಿಸಿ ಆದೇಶ ನೀಡಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ತಂಡ ಬಹುತೇಕ ಸಾಂಧರ್ಭಿಕ ಸಾಕ್ಷಿಗಳನ್ನು ಕಲೆ ಹಾಕಿದೆ.
ಕೊಲೆ ಆರೋಪಿಗೆ ಶಿವಾನಂದ ಬಂದೂಕು ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಈ ಶಿವಾನಂದ ಶ್ರೀಶೈಲ ಬಿರಾದಾರ ಭೀಮಾತೀರದ ಹಂತಕರ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಎಂದು ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿದೆ ಎನ್ನಲಾಗಿದೆ.
ಸಿಬಿಐ ಈ ಕುರಿತು ಅನೇಕ ಮಹತ್ತರವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ ಹಿನ್ನೆಲೆಯಲ್ಲಿ ಅನೇಕ ಮಾಫಿ ಸಾಕ್ಷಿಗಳಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅನೇಕರು ನ್ಯಾಯಾಲಯದ ಮುಂದೆ 164 ಹೇಳಿಕೆಯನ್ನು ದಾಖಲಿಸಿರುವುದು ಇಲ್ಲಿ ಸ್ಮರಿಸಬಹುದು.
ಇದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಅನುಕೂಲ ಕೂಡ ಆಗಲಿದೆಯೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.