ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಜಿಲ್ಲೆಯಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ.
ಹೀಗಾಗಿ ಜಿಲ್ಲೆಯ ಯಾವುದೇ ಸಾರಿಗೆ ಸಂಚಾರಕ್ಕೆ ಅವಕಾಶ ಇಲ್ಲ. ಧಾರವಾಡ ಜಿಲ್ಲೆಯ ಗಡಿಯಲ್ಲಿ 16 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಅಂತರ್ ರಾಜ್ಯ,ಅಂತರ್ ಜಿಲ್ಲೆಯಿಂದ ಒಳಬರುವ ಪ್ರಯಾಣಿಕರಿಗೆ ಸೇವಾ ಸಿಂಧು ಪಾಸ್ ಹೊರತು ಪಡಿಸಿ ಅವಕಾಶ ನಿರಾಕರಿಸಲಾಗುತ್ತಿದೆ.
ಜಿಲ್ಲೆಯ ಮಾರ್ಗವಾಗಿ ಅನ್ಯಜಿಲ್ಲೆಗಳು ಮತ್ತು ಸ್ಥಳಗಳಿಗೆ ತೆರಳುವ ಸಾರಿಗೆ ಸಂಸ್ಥೆ ಬಸ್ಸುಗಳು ಮತ್ತು ಇತರ ವಾಹನಗಳು ಧಾರವಾಡ ಜಿಲ್ಲೆಗೆ ಪ್ರಯಾಣಿಕರನ್ನು ಕರೆತರಬಾರದೆಂದು ಕಟ್ಟಪ್ಪಣೆ ಹೊರಡಿಸಲಾಗಿದೆ.
ಧಾರವಾಡದ ಕಲಗೇರಿ, ಕಾರವಾರ ರಸ್ತೆ, ಕಲಘಟಗಿ ರಸ್ತೆ, ಹೀಗೆ ಒಟ್ಟು ಜಿಲ್ಲೆಯ ಎಲ್ಲಾ ಮೂಲೆಗಳನ್ನು ಹದಿನಾರು ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾರಿಗೆ ವಾಹನಗಳ ಸಂಚಾರದ ಬಗ್ಗೆ ವಿಶೇಷ ಗಮನ ನೀಡುತ್ತಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.