ಧಾರವಾಡ prajakiran.com : ಬೆಣ್ಣಿಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ಒಟ್ಟು 13 ಜನರ ರಕ್ಷಣೆಯನ್ನು ಮಾಡಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ನವಲಗುಂದ ತಾಲೂಕಿನ ಅಮರಗೋಳ, ಕೊಂಗವಾಡ ಹಾಗೂ ಗುಡಿಸಾಗರ ಗ್ರಾಮದ ಒಟ್ಟು 13 ಜನರನ್ನು ರಕ್ಷಿಸುವಲ್ಲಿ ನವಲಗುಂದ ತಾಲೂಕು ಆಡಳಿತ ಯಶಸ್ವಿಯಾಗಿದೆ.
ಅಮರಗೋಳ ಗ್ರಾಮದ ಕಲ್ಲಪ್ಪ ಹಡಪದ, ರವಿ, ವಿಜಯಕುಮಾರ,ಗಂಗವ್ವ ಹಾಗೂ ಶೇಖವ್ವ ಹಡಪದ ಎಂಬುವರು ಸೊಟಕನಾಳ ಬಳಿ ಪ್ರವಾಹ ಸಂಭವಿಸಿದ್ದರಿಂದ ಸಿಲುಕಿಕೊಂಡಿದ್ದರು.
ಅದೇ ರೀತಿ ಕೋಂಗವಾಡ ಗ್ರಾಮದ ಶರಣಪ್ಪ ಜವಳಿ, ಮುದುಕಪ್ಪ ಜವಳಿ, ಕುಮಾರ ಸುರಕೋಡ, ಸಿದ್ದಲಿಂಗಪ್ಪ ತಳವಾರ, ಭೀಮಪ್ಪ ಜಕ್ಕಣ್ಣವರ ಪ್ರವಾಹಕ್ಕೆ ಸಿಲುಕಿಕೊಂಡಿದ್ದರು.
ಮಂಗಳವಾರ ಬೆಳಗ್ಗೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೆ ಆಗಮಿಸಿದ ಎನ್ ಡಿ ಆರ್ ಎಫ್ ತಂಡ ಸಹಕಾರದಿಂದ ಮೋಟರ್ ಬೋಟ್ ನಲ್ಲಿ ಸುರಕ್ಷಿತವಾಗಿ ಕರೆ ತರಲಾಯಿತು.
ಇನ್ನು ಗುಡಿಸಾಗರ ಗ್ರಾಮದ ಶರಣಪ್ಪ ಮೇಟಿ, ಬೀರಪ್ಪಅಂಕಲಿ, ಗಂಗವ್ವ ಕಡೇಮನಿ ಎಂಬುವರು ಸೋಮವಾರ ರಾತ್ರಿ ಗ್ರಾಮಸ್ಥರ ಸಂಪರ್ಕ ಕ್ಕೆ ಬಂದ ಮಾಹಿತಿ ಅರಿತು ಸೋಮವಾರ ತಡರಾತ್ರಿಯೇ ರಕ್ಷಿಸಲಾಗಿದೆ.
ಜಮೀನಿನಲ್ಲಿ ಹೆಸರು ಬೆಳೆ ಕೀಳಲು ತೆರಳಿದ್ದ ಸಂದರ್ಭದಲ್ಲಿ ಬೆಣ್ಣೆಹಳ್ಳ ನೆರೆ ಆವರಿಸಿತ್ತು. ಇದರಿಂದಾಗಿ ಜಮೀನು ನಡುಗಡ್ಡೆಯಂತಾಗಿ ಅವರು ಸಿಲುಕಿ ಹಾಕಿಕೊಂಡಿದ್ದರು.
ತಕ್ಷಣ ಮಾಹಿತಿ ಅರಿತ ಧಾರವಾಡ ಎಸ್ಪಿ ವರ್ತಿಕಾ ಕಟಿಯಾರ್, ತಹಸೀಲ್ದಾರ್ ನವೀನ ಹುಲ್ಲೂರು, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ ಐ ಜಯಪಾಲ್ ಪಾಟೀಲ, ಎನ್ ಡಿ ಆರ್ ಎಫ್ ತಂಡದ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಿಸಿದೆ.