ಧಾರವಾಡ prajakiran.com : ಖರೀದಿಸಿದ ಬ್ಯಾಟ್ ಗೆ ಹಣ ಕೊಡದೆ ಖದೀಮರು ಆತನ ಪ್ರಾಣಪಕ್ಷಿಯನ್ನೇ ಕಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯಾನಗರಿ ಧಾರವಾಡದ ಗಾಂಧಿ ನಗರದ ಪುಟ್ ಪಾತ್ ಮೇಲೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಹಾರಾಷ್ಟ್ರದಿಂದ ಬಂದಿದ್ದ ಬ್ಯಾಟ ತಯಾರಿಸಿ ಮಾರುವ ಕುಟುಂಬದ ಯುವಕನೊಬ್ಬ ಈ ಖದೀಮರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
ಮೃತನನ್ನು ಮಹಾರಾಷ್ಟ್ರ ದ ಮಂಗಲ ನತ್ತು ಮೋರೆ (21) ಎಂದು ಗುರುತಿಸಲಾಗಿದೆ.
ಇತನ ಬಳಿ ಬ್ಯಾಟ್ ಖರೀದಿಸಿದ ತಡಸಿನಕೊಪ್ಪ ಗ್ರಾಮದ ಹನುಮಂತ ಅಲಿಯಾಸ್ ಆಕಾಶ್ ವಾಲೀಕಾರ್ ಹಾಗೂ ನಾಗರಾಜ ಅಲಿಯಾಸ್ ಯಲ್ಲಪ್ಪ ದೊಡ್ಡಬಸ್ಸಪ್ಪ ವಾಲಿಕಾರ್ ಎಂಬುವರು ಹಣ ಕೊಡೆದೆ ಹಾಗೆಯೇ ಹೊರಟಿದ್ದರು.
ಇದರಿಂದಾಗಿ ಅವರ ವಾಹನದ ಬೆನ್ನಟ್ಟಿದ್ದ ಮಂಗಲನನ್ನು ಈ ಖದೀಮರು ನೂಕಿ ತಳ್ಳಿದ್ದರಿಂದ ಯಾಲಕ್ಕಿ ಶೆಟ್ಟರ್ ಕಾಲನಿಯ ಕೆ.ಎಚ್ ಬಿ ಕಾಲನಿಯ ಬಳಿ ಗಂಭೀರವಾಗಿ ಗಾಯಗೊಂಡಿದ್ದ.
ಇದರಿಂದಾಗಿ ಆತನನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ವಿದ್ಯಾಗಿರಿ ಪೊಲೀಸ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ, ಪಿಎಸ್ ಐ ಸಚಿನಕುಮಾರ ದಾಸರಡ್ಡಿ, ಎ ಎಸ್ ಐ ಬಿ.ಎಂ. ಅಂಗಡಿ, ಸಿಬ್ಬಂದಿಗಳಾದ ಎಂ.ಎಫ್ ನದಾಫ್, ಎ.ಬಿ. ನರೇಂದ್ರ, ಆರ್. ಕೆ. ಅತ್ತಾರ, ಬಿ.ಎಂ. ಪಟಾತ್, ಐ.ಜಿ. ಬುರ್ಜಿ, ಡಿ.ಎಸ್ ಸಾಂಗ್ಲಿಕರ್ ಅವರ ತಂಡ ಬ್ಯಾಟ್ ಖರೀದಿಸಿ ಹಣ ಕೊಡದೆ ಕಿರಿಕ್ ಮಾಡಿದ್ದ ಕಿರಾತರನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ವಿದ್ಯಾಗಿರಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಭೇದಿಸಿದಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿಪಿಗಳಾದ ಪಿ ಕೃಷ್ಣಕಾಂತ್, ಆರ್ ಎಂ. ಬಸರಗಿ ಹಾಗೂ ಎಸಿಪಿ ಜಿ. ಅನುಷಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.