ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಆ ಮೂಲಕ ಜಿಲ್ಲೆಯ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 5770 ಕ್ಕೆ ಏರಿದೆ.
ಇದೀಗ ಧಾರವಾಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ಸಿಬ್ಬಂದಿಗೂ ಕರೋನಾ ವ್ಯಾಪಿಸಿದೆ.
ನಿನ್ನೇಯಷ್ಟೆ ಧಾರವಾಡದ ಎಲ್ಲಾ ಪತ್ರಕರ್ತರಿಗೆ ಎರಡನೇ ಸುತ್ತಿನ ಕೋವಿಡ್ ತಪಾಸಣೆ ಮಾಡಿಸಲಾಗಿತ್ತು. ಪತ್ರಕರ್ತರ ವರದಿ ನೆಗೆಟಿವ್ ಬಂದರೆ ವಾರ್ತಾ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಪಾಸಿಟಿವ್ ಬಂದಿದೆ.
ಇದರಿಂದಾಗಿ ಕಚೇರಿಯನ್ನು ಸ್ಯಾನಿಟೈಸೇಷನ್ ಮಾಡಿಸಿ ಎರಡು ದಿನ ಸೀಲ್ ಡೌನ್ ಮಾಡಲಾಗುವುದು ಎಂದು ಹಿರಿಯ ಸಹಾಯಕ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಅಲ್ಲದೆ, ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಇದುವರೆಗೆ 3150 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2433 ಪ್ರಕರಣಗಳು ಸಕ್ರಿಯವಾಗಿವೆ. 45 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 187 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಇಲ್ಲಿ ಸ್ಮರಿಸಬಹುದು.