ಬೆಂಗಳೂರು prajakiran.com : ಕಳೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸುತ್ತಿದ್ದ ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ ಇದೀಗಅವರ ವಿರುದ್ದ ಮುನಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಅಷ್ಟೇ ಅವರು ನಮ್ಮ ನಾಯಕರಲ್ಲ. ನಮ್ಮ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಅಧ್ಯಕ್ಷ ಜೆಪಿ ನಡ್ಡಾ ನಮ್ಮ ನಾಯಕರು ಎಂದು ಹೇಳಿದ್ದಾರೆ.
ನಾವು ಯಡಿಯೂರಪ್ಪ,ಅನಂತಕುಮಾರ್, ಈಶ್ವರಪ್ಪ ಎಲ್ಲಾ ಸಮಕಾಲೀನರು. ನಾನು ಅವರಿಗೆ ಮಂತ್ರಿಗಿರಿ ಕೊಡಿ ಎಂದು ಕೈ ಚಾಚಲ್ಲ. ಯಾರ ಮನೆ ಬಾಗಿಲಿಗೆ ಹೋಗುವಷ್ಟು ಸಣ್ಣವನಲ್ಲ ಎಂದು ಗುಡುಗಿದ್ದಾರೆ.
ಇದೇ ವೇಳೆನಮಗೆ ಸರಕಾರ ಬೀಳಿಸುವ ಉದ್ದೇಶ ನಮಗಿಲ್ಲ. ನಾವೇಲ್ಲರೂ ಬಿಜೆಪಿ ಶಾಸಕರು. ನಾನಾಗಿಯೇ ಯಾರ ಬಳಿಯೂ ಸಚಿವ ಸ್ಥಾನ ಕೇಳಲ್ಲ. ಸಭೆಯಲ್ಲಿ ಯಾರು ಸಿಎಂ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಬದಲಾಗಬೇಕು ಎಂದರೆ ಬದಲಾವಣೆ ಅನಿವಾರ್ಯ ಎಂದು ಪರೋಕ್ಷವಾಗಿ ತಮ್ಮ ಮುನಿಸು ಹೊರ ಹಾಕಿದರು.
ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಸಿದ್ದು ಸವದಿ, ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾವು ಅವರ ಜೊತೆಗೆ ಹೋಗಲ್ಲ.
ನಮಗೆ ಸಿಎಂ ಬಗ್ಗೆ ವಿರೋಧ ಇಲ್ಲ. ಆದರೆ ಕೆಲವೊಂದು ನಿರ್ಧಾರಗಳ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದರು. ಅವರು ನಮ್ಮ ಕೆಲಸ ಮಾಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಮಂತ್ರಿ, ನಿಗಮ, ಮಂಡಳಿ, ರಾಜ್ಯಸಭಾ ಸದಸ್ಯ ಸ್ಥಾನದ ಕುರಿತು ಯಾವುದೇ ಚರ್ಚೆ ಆಗಿಲ್ಲ. ನಾಯಕತ್ವ ವಿರೋಧವಿದೆ ಎಂದು ಕೆಲವರು ಹೇಳಿದ್ದಾರೆ.
ರಾಜ್ಯದಲ್ಲಿ ಅವರು ಮುಖ್ಯಮಂತ್ರಿ ಆದಮೇಲೆ ಮಹಾಪೂರ, ಅತಿವೃಷ್ಟಿ, ಕರೋನಾ ಸಂಕಷ್ಟ ಇದೆ. ಭಿನ್ನಾಭಿಪ್ರಾಯ ವಿಲ್ಲ. ನಮ್ಮ ಮನೆ ಒಳಗಿನ ಜಗಳ ಇದ್ದೆ ಇದೆ. ಆದರೆ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿ ಎಂಬುದಷ್ಟೇ ನಮ್ಮ ಮನವಿ ಎಂದು ಹೇಳಿದರು.
ಇದೇ ವೇಳೆ ಮಾಜಿ ಸಂಸದ ರಮೇಶ ಕತ್ತಿ ಹೇಳಿಕೆಗೆ ಸುರಪುರ ಶಾಸಕ ರಾಜು ಗೌಡ ಬೇಸರ ವ್ಯಕ್ತಪಡಿಸಿದರು. ಅವರು ಸಭೆಯಲ್ಲಿ ಭಾಗವಹಿಸಿಲ್ಲ. ಅವರಿಗೆ ಸತ್ಯಾಂಶ ಗೊತ್ತಿಲ್ಲ. ಉಮೇಶ ಕತ್ತಿ ಊಟಕ್ಕೆ ಕರೆದಿದ್ದರು ಹೋಗಿದ್ದಿವಿ ಎಂದು ಸಮಜಾಯಿಸಿ ನೀಡಿದರು.
ಯಡಿಯೂರಪ್ಪ ನಾಯಕತ್ವದ ಬಗ್ಗೆ ಚರ್ಚೆಯೇ ನಡೆದಿಲ್ಲ. ಯಾವಾಗಲೂ ಸಭೆ ಸೇರುತ್ತಿರುತ್ತೀವಿ ಎಂದು ತೇಪೆ ಹಾಕಿದರು. ಇದೇ ವೇಳೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ನನಗೆ ಮೀಟಿಂಗ್ ಬಗ್ಗೆ ಗೊತ್ತೇ ಇರಲಿಲ್ಲ. ಸಭೆಯ ಬಗ್ಗೆ ಮಾಹಿತಿಯೇ ಇಲ್ಲ. ಕರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ. ಮನವಿ ಮಾಡಿದಾಗ ಒಪ್ಪಿಗೆ ಸೂಚಿಸುತ್ತಾರೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಆಡಳಿತ ಪಕ್ಷದ ಶಾಸಕರಿಗೆ ಸ್ಪಂದನೆ, ಮಾನ್ಯತೆ ಗೌರವ ಸಿಗುತ್ತಿಲ್ಲ. ಬಿಜೆಪಿಗೆ ಒಬ್ಬನೇ ಲಿಂಗಾಯತ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕೆಲವರು ಅಸಮಾಧಾನ ತೋಡಿಕೊಂಡಿದ್ದಾರೆ.
ಈ ಸಭೆಯಲ್ಲಿ ಬಿಜೆಪಿಯ ಉತ್ತರ ಕರ್ನಾಟಕ ಭಾಗದ 27 ಶಾಸಕರು ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಸೇಡಂ ಶಾಸಕ ರಾಜಕುಮಾರ್ ಪಾಟೀಲ, ಆಳಂದ ಶಾಸಕ ಸುಭಾಷ ಗುತ್ತೇದಾರ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕಲಬುರಗಿ ಶಾಸಕ ದತ್ತಾತ್ತೇಯ ಪಾಟೀಲ ರೇವೂರ, ಸುರಪುರ ಶಾಸಕ ರಾಜುಗೌಡ ಪಾಟಿಲ್, ಶಿರಗುಪ್ಪಿ ಶಾಸಕ ಸೋಮಲಿಂಗಪ್ಪ, ರಾಯಚೂರು ಶಾಸಕ ಶಿವರಾಜ ಪಾಟೀಲ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಸವರಾಜ ಮತ್ತಿಮಡ, ಸಿದ್ದು ಸವದಿ ಇದ್ದರು ಎಂದು ಹೇಳಲಾಗುತ್ತಿದೆ.