ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ DWD – 68 ಪಿ– 5970 ನೇ ಸೋಂಕಿತ 31 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಧಾರವಾಡದ ಹುಕ್ಕೇರಿಕರ್ ನಗರ, ಯಾಲಕ್ಕಿ ಶೆಟ್ಟರ್ ಕಾಲನಿಯನ್ನು ಸಂಪೂರ್ಣ ನಿಯಂತ್ರಿತ ವಲಯವೆಂದು ಘೋಷಿಸಿ ಸಂಪೂರ್ಣ ಪ್ರದೇಶವನ್ನು ಸೀಲ್ ಡೌನ್ ಮಾಡಿ ಧಾರವಾಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿಯಂತ್ರಿತ ವಲಯದ 200 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಿ ಕೋವಿಡ್ 19 ಸೋಂಕು ತಡೆಗಟ್ಟಲು ಕಣ್ಗಾವಲು ಇಡಲು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಅಲ್ಲದೆ, 100 ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೆ ಸೇವೆಗಳನ್ನು ಜನರಿಗೆ ವಿತರಿಸವುದನ್ನು ನಿಷೇಧಿಸಲಾಗಿದೆ.
ಹೀಗಾಗಿ ಈ ಆದೇಶವನ್ನು ಎಲ್ಲರೂ ಚಾಚುತಪ್ಪದೆ ಪಾಲಿಸಬೇಕು. ಮುಂದಿನ ಆದೇಶದವರೆಗೆ ಅಲ್ಲಿಯ ನಿವಾಸಿಗಳು ಸಾಮಾಜಿಕಅಂತರ ಕಾಪಾಡಿಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಹುಕ್ಕೇರಿಕರ್ ನಗರ, ಯಾಲಕ್ಕಿ ಶೆಟ್ಟರ್ ಪ್ರದೇಶದಲ್ಲಿ ಶುಚಿತ್ವವನ್ನು ತಪ್ಪದೇ ಕಾಪಾಡಿಕೊಳ್ಳಬೇಕು. ಶವ ಸಂಸ್ಕಾರಕ್ಕೆ ಈ ಆದೇಶಅನ್ವಯಿಸುವುದಿಲ್ಲ.
ಆದರೆ ಶವ ಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಲು ಅವಕಾಶವಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಸಾಂಕ್ರಾಮಿಕ ರೋಗ ಹರಡುವಿಕೆ ಕಾಯ್ದೆ ಅನ್ವಯ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ.
ಈ ಹಿಂದೆ ವಿದ್ಯಾನಗರಿ ಧಾರವಾಡದ ನವಲೂರಿನ ಪಠಾಣ ಗಲ್ಲಿ, ಹೊಸಯಲ್ಲಾಪುರ ನವಲೂರು ಅಗಸಿ, ಕೋಳಿಕೆರೆ, ದೊಡ್ಡನಾಯಕನಕೊಪ್ಪ ಕೂಡ ನಿಯಂತ್ರಿತ ಪ್ರದೇಶವೆಂದು ಘೋಷಿಸಿರುವುದು ಇಲ್ಲಿ ಸ್ಮರಿಸಬಹುದು.