ಧಾರವಾಡ prajakiran.com : ಧಾರವಾಡದ ಸಪ್ತಾಪುರದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಪಿಯು ಕಾಲೇಜಿನ ವಿದ್ಯಾರ್ಥಿನಿಗೆ
ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ಸಂಸ್ಥೆ ಅಧ್ಯಕ್ಷ ಬಸವರಾಜ ಯಡಣ್ಣವರನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಅಲೆದಾಡುತ್ತಿದ್ದ ಬಸವರಾಜ ಯಡಣ್ಣವರ್ ಹೆಡೆಮುರಿಗೆ ಕಟ್ಟುವಲ್ಲಿ ಧಾರವಾಡದ ಉಪನಗರದ ಪೊಲೀಸ್ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ, ಎ1 ಆರೋಪಿಯಾಗಿರುವ ಕಾಲೇಜು ಅಧ್ಯಕ್ಷ ಬಸವರಾಜ ಯಡಣ್ಣವರನನ್ನು 2ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.
ನ್ಯಾಯಾಲಯವು ಆತನನ್ನು ಆ. 30 ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈಗಾಗಲೇ ಕಾಲೇಜು ಪ್ರಾಚಾರ್ಯ ಕುರುವತ್ತಿಗೌಡರ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬಸವರಾಜ ಯಡಣ್ಣವರ ಪ್ರಕರಣ ದಾಖಲು ಆಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ.
ಈ ಹಿನ್ನಲೆಯಲ್ಲಿ ಆತನ ಹುಡುಕಾಟಕ್ಕೆ ಪೊಲೀಸರು ವಿವಿಧ ಕಡೆಗಳಲ್ಲಿ ಜಾಲ ಬೀಸಿದ್ದರು.
ಇತ ಕಳೆದ ಒಂದು ವರ್ಷದಲ್ಲಿ ಅನೇಕ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸಿದಲ್ಲದೆ, ಸ್ಪಂದಿಸದವರಿಗೆ ಅನಗತ್ಯವಾಗಿ ಕಿರುಕುಳ ಕೊಡುತ್ತಿದ್ದ ಎಂಬ ಗಂಭೀರವಾದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಕೂಡ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭುರಾವ್ ಅವರು ಸಮಗ್ರ ತನಿಖೆ ನಡೆಸಿ, ಆತನ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಹಲವು ಪೋಷಕರು ಒತ್ತಾಯಿಸಿದ್ದಾರೆ.
ಈಗಾಗಲೇ ಇತನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲು ಆಗಿದ್ದು, ಅನೇಕರು ಆತನ ವಿರುದ್ದ ದೂರು ನೀಡಲು ಮುಂದೆ ಬಂದಿದ್ದಾರೆ.
ಆ ಕುರಿತು ತನಿಖೆ ನಡೆಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂಬುದು ಎಲ್ಲಾ ಪೋಷಕರ ಒತ್ತಾಸೆಯಾಗಿದೆ.
ಇದಕ್ಕೆ ಧಾರವಾಡದ ಉಪನಗರ ಪೊಲೀಸರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕು.