ಯಾದಗಿರಿ prajakiran.com : ಕಳೆದ ದಿನಗಳ ಹಿಂದೆ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವು ತೆರವಾದ ಹಿನ್ನೆಲೆಯಲ್ಲಿ ನಡೆದ ಜುಲೈ 10 ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
ಕರೋನ ವೈರಸ್ ನಿಂದ ಸ್ವಲ್ಪ ತಡೆ : ಯಾದಗಿರಿ ಜಿಲ್ಲಾಡಳಿತದ ಸಿಬ್ಬಂದಿಗಳಿಗೆ ಕರೋನಾವೈರಸ್ ಬಂದಿರುವ ಹಿನ್ನೆಲೆ ಜಿಲ್ಲಾಡಳಿತದ ಭವನಕ್ಕೆ ಸಂಪೂರ್ಣ ಸ್ಯಾನಿಟೇಜಿಂಗ್ ಸಿಂಪರಣೆ ಮಾಡಲಾಗುತ್ತಿತ್ತು.
ಹೀಗಾಗಿ ಬೆಳಿಗ್ಗೆ ಪ್ರಾರಂಭವಾಗಬೇಕಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆ ಮಧ್ಯಾಹ್ನ ಪ್ರಾರಂಭವಾಯಿತು.
ಮಧ್ಯಾಹ್ನ 3 ಗಂಟೆಗೆ 22 ಜಿಲ್ಲಾ ಪಂಚಾಯತ್ ಸದಸ್ಯರು ಸಭಾಂಗಣದಲ್ಲಿ ಹಾಜರಾಗಿದ್ದರು. ಅದರಲ್ಲಿ ಬಿಜೆಪಿಯ 10 ಸದಸ್ಯರು ಹಾಗೂ ಕಾಂಗ್ರೆಸ್ ನ 11 ಹಾಗೂ ಜೆಡಿಎಸನ ಒಬ್ಬ ಅಭ್ಯರ್ಥಿ ಮತ ಚಲಾಯಿಸಿದರು.
ಯಾದಗಿರಿ ಜಿಲ್ಲಾ ಪಂಚಾಯತಿ 24 ಸದಸ್ಯರಲ್ಲಿ ಒಬ್ಬ ಬಿಜೆಪಿ ಸದಸ್ಯ ಭೀಮನಗೌಡ ಹಾಗೂ ಕಾಂಗ್ರೆಸ್ ಸದಸ್ಯ ಅಶೋಕ್ ರೆಡ್ಡಿ ಗೋನಾಲ್ ಅಕಾಲಿಕ ಮರಣ ಹೊಂದಿದ್ದರು. ಹೀಗಾಗಿ ಸದಸ್ಯರ ಸಂಖ್ಯೆಯು ಕುಸಿದು 22 ಅಭ್ಯರ್ಥಿಗಳಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶರಣಮ್ಮ ನಾಗಮ್ಮ ಪಕ್ಷದ ಪರವಾಗಿ ಕಣಕ್ಕಿಳಿದಿದ್ದರು . ಬಿಜೆಪಿ ಯಿಂದ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ.
ಆದರೆ ಕಾಂಗ್ರೆಸ್ ಪಕ್ಷದ ಸದಸ್ಯ ಯಡಿಯಾಪುರ ಬಸವನಗೌಡ ತಮ್ಮದೇ ಪಕ್ಷದ ಅಭ್ಯರ್ಥಿ ಶರಣಮ್ಮ ನಾಗಮ್ಮ ವಿರುದ್ಧ ಬಂಡಾಯವೆದ್ದು ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಜಯಭೇರಿ ಬಾರಿಸಿದರು.
ಬಿಜೆಪಿಯ 10 ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯ ಕಿಶನ್ ರಾಠೋಡ್ ಬಂಡಾಯ ಅಭ್ಯರ್ಥಿ ಯಡಿಯಾಪುರ ಬಸನಗೌಡರಿಗೆ ಬೆಂಬಲವನ್ನು ಸೂಚಿಸಿದರು. ಹೀಗಾಗಿ ನೂತನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಯಡಿಯಾಪುರ ಬಸನಗೌಡ ಆಯ್ಕೆಯಾದರು.
ಕಾಂಗ್ರೆಸ್ ಗೊಂದಲ : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣೆ ನಡೆಯುವ ಪೂರ್ವ ಜಿಲ್ಲಾ ಚುನಾವಣೆ ವೀಕ್ಷಕ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸನ 12 ಸದಸ್ಯರಿಗೆ ಸಭೆಗೆ ಹಾಜರಾಗಲು ವಿಪ್ ಜಾರಿ ಮಾಡಿದ್ದರು.
ಅದರಂತೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣಾ ಅಧಿಕೃತ ಅಭ್ಯರ್ಥಿಯಾಗಿ ಶರಣಮ್ಮ ನಾಗಪ್ಪ ಅವರನ್ನು ಘೋಷಿಸಲಾಗಿತ್ತು.
ಆದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯಡಿಯಾಪುರ ಬಸನಗೌಡ ಹಾಗೂ ಬೆಂಬಲಿತ ಸದಸ್ಯರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾಗಿರಲಿಲ್ಲ.
ಪಕ್ಷಾಂತರ ನಿಷೇಧ ಕಾಯ್ದೆ ತೂಗುಕತ್ತಿ :
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯಡಿಯಾಪುರ ಬಸನಗೌಡ ಬಂಡಾಯವೆದ್ದು ಚುನಾವಣೆ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ತೂಗುಕತ್ತಿ ನೇತಾಡುತ್ತಿದೆ.
ಕಾಂಗ್ರೆಸ್ಸಿನ ಕೆಲವು ಸದಸ್ಯರು ಸಂವಿಧಾನದ ಹತ್ತನೇ ಅನುಸೂಚಿ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕಾಂಗ್ರೆಸ್ ಅಭ್ಯರ್ಥಿ ಯಡಿಯಾಪುರ ಬಸನಗೌಡ ಅವರ ಪ್ರಾಥಮಿಕ ಕಾಂಗ್ರೆಸ್ ಸದಸ್ಯತ್ವವನ್ನು ರದ್ದು ಮಾಡುವಂತೆ ಚುನಾವಣೆ ವೀಕ್ಷಕ ಅಲ್ಲಂಪ್ರಭು ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.