ಧಾರವಾಡ prajakiran. com : ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ, ಉಪನ್ಯಾಸಕರಿಗೆ ಮನೆಯಿಂದಲೇ ಬೋಧಕೇತರ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಎ.22 ರಿಂದ ಕೋವಿಡ್–19 ಸೋಂಕು ನಿಯಂತ್ರಣಕ್ಕಾಗಿ ಶಾಲೆ, ಕಾಲೇಜು, ಕೋಚಿಂಗ್ ಕೆಂದ್ರಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದರೂ ಶಿಕ್ಷಕರು, ಉಪನ್ಯಾಸಕರು ಶಾಲೆ, ಕಾಲೇಜುಗಳಿಗೆ ಹೋಗಿ ಕರ್ತವ್ಯ ನಿರ್ವಹಿಸಬೇಕೆಂದು ಕೆಳ ಹಂತದ ಅಧಿಕಾರಿಗಳು ಸೂಚಿಸುತ್ತಿದ್ದಾರೆ.
ಅನಿವಾರ್ಯವಾಗಿ ಮೇಲಾಧಿಕಾರಿಗಳ ಆದೇಶ ಪಾಲನೆಗಾಗಿ ಶಾಲಾ ಕರ್ತವ್ಯಕ್ಕೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಶಿಕ್ಷಕ ಸಮುದಾಯಕ್ಕೆ ತೊಂದರೆಯಾಗುತ್ತಿದೆ.
ವಿದ್ಯಾರ್ಥಿಗಳ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಪ್ರಶ್ನೆ ಪತ್ರಿಕೆ ಇನ್ನಿತರ ಬೋಧಕೇತರ ಕಾರ್ಯವನ್ನು ಶಿಕ್ಷಕರು ಮನೆಯಿಂದಲೇ ನಿರ್ವಹಿಸುತ್ತಾರೆ.
ಆದ್ದರಿಂದ ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಶಿಕ್ಷಕರು ಶಾಲೆಗೆ ಹೋಗಿ ಕರ್ತವ್ಯ ನಿರ್ವಹಿಸಿ ಎಂದು ಹೇಳುವುದು ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ತಪ್ಪು ಮಾಡಿದಂತೆ ಆಗುತ್ತದೆ.
ಅಧಿಕಾರಿಗಳು, ಸರ್ಕಾರಿ ಆದೇಶ ಪಾಲನೆ ಮಾಡಿ ಶಿಕ್ಷಕರು ಮನೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸಬೇಕು ಎಂದು ಬಸವರಾಜ ಗುರಿಕಾರ ಒತ್ತಾಯಿಸಿದ್ದಾರೆ.