ಕರ್ನಾಟಕದಿಂದ 1.25 ಟ್ರಿಲಿಯನ್ ಡಾಲರ್ನಷ್ಟು ಭಾರತಕ್ಕೆ ಕೊಡುಗೆ ನೀಡಲು ಸಂಕಲ್ಪ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮೈಸೂರು prajakiran. com ಜೂನ್ 20 :
ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, ಕರ್ನಾಟಕದಿಂದ 1.25 ಟ್ರಿಲಿಯನ್ ಡಾಲರ್ನಷ್ಟು ಕೊಡುಗೆಯನ್ನು ದೇಶಕ್ಕೆ ನೀಡಲು ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಗನಹಳ್ಳಿ ಹೊಸ ಕೋಚಿಂಗ್ ಕಾಂಪ್ಲೆಕ್ಸ್ ಮತ್ತು ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಗೆ ಶಂಕುಸ್ಥಾಪನೆ ಹಾಗೂ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ನ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿ ಮಾತನಾಡಿದರು.
ಈ ಕೊಡುಗೆಯನ್ನು ನೀಡಲು ನಾವೆಲ್ಲರೂ ಶ್ರಮವಹಿಸಬೇಕಿದೆ. ದಿನಕ್ಕೆ 20 ತಾಸು ಕೆಲಸ ಮಾಡಬೇಕಿದೆ. ಆರ್ಥಿಕತೆ ಎಂದರೆ ದುಡ್ಡಲ್ಲ. ಜನರ ಕ್ರಿಯಾಶಕ್ತಿ, ಜನಶಕ್ತಿ. ದುಡಿಮೆಯೇ ದೊಡ್ಡಪ್ಪ ಎಂಬ ಕಾಲವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
*ಮೈಸೂರಿನ ಬಗ್ಗೆ ವಿಶೇಷ ಪ್ರೀತಿ :*
ಪ್ರಧಾನಿ ಮೋದಿಯವರಿಗೆ ಸಾಂಸ್ಕøತಿಕ ನಗರಿ ಮೈಸೂರಿನ ಮೇಲೆ ವಿಶೇಷ ಪ್ರೀತಿ. ಹಲವಾರು ವರ್ಷಗಳಿಂದ ಮೈಸೂರಿಗೆ ಯೋಗದಿನಾಚರಣೆಯ ಸಂದರ್ಭದಲ್ಲಿ ಬರಬೇಕೆಂದು ಇಚ್ಛಿಸುತ್ತಿದ್ದರು.
ಈ ಬಾರಿ ಯೋಗದಿನಾಚರಣೆಯನ್ನು ಮೈಸೂರಿನಲ್ಲೇ ಆಚರಿಸಲು ಮಾಡಿರುವ ತೀರ್ಮಾನ ಮೋದಿಯವರ ಮೈಸೂರಿನ ಮೇಲಿನ ಪ್ರೀತಿಯನ್ನು ಬಿಂಬಿಸುತ್ತದೆ. ಭಾರತ ಹಲವಾರು ಪ್ರಧಾನಿಗಳನ್ನು ಕಂಡಿದೆ.
ಆದರೆ ಜನಮೆಚ್ಚಿದ ನಾಯಕ, ಅಪರೂಪದ ಪ್ರಧಾನಿಯಿದ್ದರೆ ಅದು ನರೇಂದ್ರ ಮೋದಿಯವರು ಮಾತ್ರ. ರಾಜಕಾರಣದಲ್ಲಿ ಅಧಿಕಾರಕ್ಕಾಗಿ ರಾಜಕಾರಣ ಮಾಡುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಆದರೆ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದಾಗಿನ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಂಡು ದೇಶದ ಪ್ರಧಾನಿಯಾಗುವಂತೆ ಜನರು ಬಯಸಿದರು.
20 ವರ್ಷಗಳ ರಾಜಕೀಯ ಜೀವನದಲ್ಲಿ ಮೋದಿಯವರು ಪ್ರಧಾನಿಯಾಗಿ 8 ವರ್ಷಗಳನ್ನು ಪೂರೈಸಿದ್ದಾರೆ. ಹಿಂದಿನಿಂದ ಇದ್ದ ಪ್ರಧಾನಿಗಳು ಅಧಿಕಾರ ರಾಜಕಾರಣ ಮಾಡಿದರೆ. ಮೋದಿಯವರು ಜನರಾಜಕಾರಣ ಹಾಗೂ ಜನರಿಗೋಸ್ಕರ ರಾಜಕಾರಣವನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
*ಬಡವರ ಹಿತಕಾಯುವ ಯೋಜನೆಗಳು:*
ಹಸಿವು, ದುಡಿಮೆ, ಬಡತನವನ್ನು ಅನುಭವಿಸಿ, ತಿಳಿದಿರುವ ವ್ಯಕ್ತಿಗೆ ಅಧಿಕಾರ ಬಂದಾಗ ಜನರಿಗೆ ಕಷ್ಟಗಳು ಬರಬಾರದೆಂಬ ಹಿತದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಅವರು ಸೈದಾಂತಿಕ, ಅಭಿವೃಧ್ಧಿಯ ಹಾಗೂ ಮಾನವೀಯ ರಾಜಕಾರಣವನ್ನು ಮಾಡಿದ್ದಾರೆ. ಸ್ವಚ್ಛ ಭಾರತ, ಆಯುಷ್ಮಾನ್ ಭಾರತ, ಕಿಸಾನ್ ಸಮ್ಮಾನ್, ಪ್ರಧಾನಮಮತ್ರಿ ಆವಾಸ್ ಯೋಜನೆ, ಯುವಕರಿಗೆ ಉದ್ಯೋಗ, ಉದ್ಯಮ ಕಲ್ಪಿಸುವ ಮುದ್ರಾ ಯೋಜನೆ, ಮಾತೃಯೋಜನೆ, ಉಜ್ವಲಾ ಯೋಜನೆಯಂತಹ ಬಡವರಪರ ಯೋಜನೆಗಳನ್ನು ಪ್ರಧಾನಿ ಮೋದಿಯವರು ಕಲ್ಪಿಸಿದ್ದಾರೆ ಎಂದರು.
ಭಾರತದ ಸುರಕ್ಷತೆ, ಏಕತೆ, ಅಖಂಡತೆ, ಸಾಮಾಜಿಕ ಸಾಮರಸ್ಯ, ಆರ್ಥಿಕ ಪ್ರಗತಿ, ವಿಶ್ವಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
*ಮೈಸೂರಿನ ಸಮಗ್ರ ಅಭಿವೃದ್ಧಿಯ ಗುರಿ:*
ಇದು ಡಬಲ್ ಇಂಜಿನ್ ಸರ್ಕಾರ. ಕೇಂದ್ರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದೇವೆ. ಮೈಸೂರಿಗೆ ಟೂರಿಸಂ ಸರ್ಕೀಟ್ ಈ ವರ್ಷ ಪ್ರಾರಂಭಿಸಲಾಗುತ್ತಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣದ ವಿಸ್ತರಣೆಯನ್ನು ಮಾಡಲು ಈಗಾಗಲೇ ಅನುಮೋದನೆಯನ್ನು ನೀಡಿದ್ದೇನೆ. ಕೆ.ಆರ್. ಆಸ್ಪತ್ರೆಗೆ 89 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ.
ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 1000 ಸಾಮಥ್ರ್ಯದ ಬಹುಮಹಡಿ ವಸತಿನಿಲಯ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ಮೈಸೂರಿನಲ್ಲಿ ನಿರ್ಮಿಸಲಾಗುತ್ತಿದೆ.
ಜ್ಞಾನಕೇಂದ್ರವಾಗಿರುವ ಮೈಸೂರಿನಲ್ಲಿ ಜ್ಞಾನ ಆಧಾರಿತ ಉದ್ಯಮಗಳನ್ನು ಇಲ್ಲಿ ಸ್ಥಾಪಿಸಲಾಗುವುದು. ಬರುವ ದಿನಗಳಲ್ಲಿ ನರೇಂದ್ರ ಮೋದಿಯವರನ್ನು ಬಲಪಡಿಸಿ ಮುಂಬರುವ ಚುನಾವಣೆಗಳಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಭಾರತ ಅಭಿವೃದ್ಧಿ ಪಥವನ್ನು ನಿರಂತರವಾಗಿ ಮುಂದುವರೆಸಲು ಸಹಕರಿಸುತ್ತೀರೆಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.