ಧಾರವಾಡ prajakiran.com : ಕ್ಷುಲ್ಲಕ ಕಾರಣಕ್ಕೆ ಧಾರವಾಡ ಜಿಲ್ಲಾ ಆಸ್ಪತ್ರೆಯ ಕೆಲ ಸಿಬ್ಬಂದಿ ಯುವಕರಿಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ವೃದ್ಧೆಯನ್ನು ಯುವಕರಿಬ್ಬರು ಬೆಡ್ಗೆ ಶಿಫ್ಟ್ ಮಾಡಲು ಕೊಠಡಿ ಪ್ರವೇಶ ಮಾಡಿದ್ದೇ ಈ ಹಲ್ಲೆಗೆ ಕಾರಣ ಎಂದು ತಿಳಿದು ಬಂದಿದೆ.
ತೇಜಸ್ವಿನಗರದ ಮಹ್ಮದ್ಸಾದಿಕ್ ಸವಣೂರ ಹಾಗೂ ತೌಫಿಕ್ ಎಂಬುವವರೇ ಹಲ್ಲೆಗೊಳಗಾದವರು.
ಜಿಲ್ಲಾ ಆಸ್ಪತ್ರೆಯಲ್ಲಿ ಅಟೆಂಡರ್ ಕೆಲಸ ಮಾಡುವ ಸಿಬ್ಬಂದಿಯೇ ಈ ಯುವಕರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರು ಕೂಡ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಇಬ್ಬರು ಪರಸ್ಪರ ದೂರು ಪ್ರತಿದೂರು ನೀಡಲು ಮುಂದಾಗಿದ್ದು, ಪ್ರಕರಣ ಧಾರವಾಡ ಉಪನಗರ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ.
ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಅರಿತು ಆಸ್ಪತ್ರೆ ಸಿಬ್ಬಂದಿ ಹಾಗೂ ಹಲ್ಲೆಗೊಳಗಾದ ಯುವಕರ ನಡುವೆ ರಾಜಿ ಸಂಧಾನದ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.