ಧಾರವಾಡ prajakiran.com: ಸದಾ ಸುದ್ದಿಯ ಜಂಜಡದಲ್ಲಿರುವ ಪತ್ರಕರ್ತರು ಕುಟುಂಬದ ಸಮಸ್ಯೆಗಳನ್ನು ಬದಿಗಿಟ್ಟು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ರಂಗದಲ್ಲಿ 24*7 ಕಾರ್ಯ ನಿರ್ವಹಿಸುವುದು ಅನಿವಾರ್ಯ. ಇದರ ಮಧ್ಯೆ ಪತ್ರಕರ್ತರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಲ್ಲದೆ, ಕುಟುಂಬದ ಸದಸ್ಯರಿಗೆ ಸಮಯ ಮೀಸಲಿಡುವುದೂ ಮುಖ್ಯ. ಇದರಿಂದ ಹೆಚ್ಚಿನ ಸಾಧನೆಗೆ ಉತ್ಸಾಹ ಸಿಗಲಿದೆ.
ಕೇವಲ ಸಂಘಟನೆ ಆರಂಭಿಸಿದರೆ ಸಾಲದು. ಅದರಿಂದ ಸದಸ್ಯರಿಗೆ ಆರ್ಥಿಕ ಸಹಾಯ ಮಾಡುವ ಕೆಲಸವೂ ಆಗಬೇಕು. ಇಂತಹ ಕಾರ್ಯಗಳಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ ಮಾತನಾಡಿ, ಪತ್ರಕರ್ತರು ತಮ್ಮ ಕುಟುಂಬ ಸದಸ್ಯರಿಗೆ ಸಮಯ ನೀಡುವುದೇ ಕಷ್ಟ. ಅಂತಹದ್ದರಲ್ಲಿ ಸದಸ್ಯರೊಂದಿಗೆ ಒಂದೆಡೆ ಸೇರಿರುವುದು ಖುಷಿ ತಂದಿದೆ.
ಇಂತಹ ಕಾರ್ಯಕ್ರಮಗಳು ಬೃಹತ್ ಮಟ್ಟದಲ್ಲಿ ನಡೆಯಲಿ. ಸಂಘದ ಕಾರ್ಯಗಳಿಗೆ ನಮ್ಮ ಸಹಕಾರ, ಬೆಂಬಲ ಸದಾ ಸಿಗಲಿದೆ ಎಂದು ಭರವಸೆ ನೀಡಿದರು.
ಮಾಲತೇಶ ನಾಡಗೌಡ ಮಾತನಾಡಿದರು. ಗಿಲ್ಡ್ ಅಧ್ಯಕ್ಷ ಬಸವರಾಜ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ನಂತರ ಮಲ್ಲಪ್ಪ ಹೊಂಗಲ ಹಾಸ್ಯ ಹಾಗೂ ರತಿಕಾ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ನೃತ್ಯ ಜರುಗಿದವು.ಗಿಲ್ಡ್ ಸದಸ್ಯರು, ಕುಟುಂಬಸ್ಥರು, ಇತರರು ಪಾಲ್ಗೊಂಡಿದ್ದರು.
ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಸ್ವಾಗತಿಸಿದರು. ಕಾರ್ಯದರ್ಶಿ ರವಿಕುಮಾರ ಕಗ್ಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಬಸವರಾಜ ಹೊಂಗಲ ನಿರೂಪಿಸಿದರು.