ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರಕಾರ ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ ಹೀಗೆ ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದರು.
ಅವರು ಗುರುವಾರ ನಗರದ ಬಾರಾಕೋಟ್ರಿಯಲ್ಲಿರುವ ವಿನಯ ಕುಲಕರ್ಣಿ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ವಿನಯ ಕುಲಕರ್ಣಿ ನಮ್ಮಕುಟುಂಬ ಸದಸ್ಯರೆಂಬ ಭಾವನೆಯಿಂದ ಭೇಟಿಯಾದೆ. ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದರು.
ವಿನಯ ಕುಲಕರ್ಣಿ ಅಮಾಯಕರಾಗಿದ್ದಾರೆ. ಹಲವು ವರ್ಷಗಳಿಂದ ಅವರು ನನಗೆ ಪರಿಚಿತರು. ರಾಜಕೀಯವಾಗಿ ಅವರನ್ನು ಈ ಕೇಸ್ನಲ್ಲಿ ಸಿಲುಕಿಸಿದ್ದಾರೆ ಎಂದರು.
ಸಿದ್ದು ಸವದಿ ಮಹಿಳೆಯರನ್ನು ಎಳೆದಾಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಪಾಟೀಲ,
ಎಲ್ಲಿ ಮಹಿಳೆಯರನ್ನು ಗೌರವಯುತ ಕಾಣುತ್ತಾರೆ. ಅಲ್ಲಿ ಶಾಂತಿ ನೆಲೆಸುತ್ತದೆ. ಶಿಸ್ತು, ಪರಂಪರೆ, ಸಂಸ್ಕೃತಿ ಕಾಪಾಡುವ ಪಕ್ಷ ಎನ್ನುತ್ತಾರೆ. ಆದರೆ ಸಿದ್ದು ಸವದಿ ಅದಕ್ಕೆ ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಚುನಾಯಿತ ಪ್ರತಿನಿಧಿ ಮಹಿಳೆಯನ್ನೇ ಎಳೆದಾಡಿದ ಘಟನೆ ನಿಜವಾಗಿಯೂ ಖಂಡನೀಯ. ಈ ಕುರಿತು ಬಾಗಲಕೋಟೆ ಎಸ್ಪಿ ಜೊತೆ ಮಾತನಾಡಿದ್ದೇನೆ ಎಂದು ಪಾಟೀಲ ವಿವರಿಸಿದರು.