ತಿಪಟೂರು ಪ್ರಜಾಕಿರಣ.ಕಾಮ್ : ದಿಂಗಾಲೇಶ್ವರ ಶ್ರೀ ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವೀರಶೈವ ಸಮಾಜ ಮಾತ್ರವಲ್ಲ, ಯಾವೊಬ್ಬ ವ್ಯಕ್ತಿಯನ್ನು ಕಡೆಗಣಿಸಿದವರಲ್ಲ ಎಂಬ ಸಂದೇಶ ನೀಡಿದ್ದಾರೆ.
ಧಾರವಾಡ ಲೋಕಸಭಾ ಕೇತ್ರದಲ್ಲಿ ನಿರಂತರವಾಗಿ ನಾಲ್ಕು ಬಾರಿ ಸಂಸದರಾಗಿ ಪ್ರಲ್ಹಾದ ಜೋಶಿಯವರು ಯಾವುದೇ ಸಮುದಾಯವನ್ನು ತುಳಿದು ಮೇಲೆ ಬಂದವರಲ್ಲ.
ಅವರದ್ದೇ ಆದ ವರ್ಚಸ್ಸು, ಅಭಿವೃದ್ಧಿ ಕೆಲಸ ಕಾರ್ಯಗಳಿಂದಲೇ ಪ್ರಧಾನಿ ಮೋದಿ ಅವರ ಆಪ್ತರಾಗಿ, ಕೇಂದ್ರ ಮಟ್ಟದ ಮುಂಚೂಣಿ ನಾಯಕರಾಗಿ ಮುನ್ನಲೆಗೆ ಬಂದಿದ್ದಾರೆ ಎಂದು ಷಡಕ್ಷರಿ ಸ್ವಾಮೀಜಿ ಹೇಳಿದ್ದಾರೆ.
ರಾಜಕೀಯದಲ್ಲಿ ಮೂಗು ತೂರಿಸುತ್ತಿರುವ ದಿಂಗಾಲೇಶ್ವರ ಶ್ರೀ ತಮ್ಮ ಸ್ವಾರ್ಥಕ್ಕಾಗಿ ಪ್ರಲ್ಹಾದ ಜೋಶಿಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪ್ರಹ್ಲಾದ ಜೋಶಿ ಅವರು ವೀರಶೈವರಿಗೆ ಪ್ರಾಶಸ್ತ್ಯ ನೀಡಿಲ್ಲ ಎಂಬ ದಿಂಗಾಲೇಶ್ವರರ ಆರೋಪದಲ್ಲಿ ಹುರುಳಿಲ್ಲ. ಅಲ್ಲದೇ, ಅವರ ಕ್ಷೇತ್ರ ಬದಲಾವಣೆ ಚರ್ಚೆಯೂ ಅಪ್ರಸ್ತುತ ಎಂದು ಷಡಕ್ಷರಿ ಶ್ರೀ ಹೇಳಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಸ್ವಾರ್ಥಕ್ಕಾಗಿ ಹೀಗೆಲ್ಲ ಮಾಡಬಾರದು. ಒಂದು ವೇಳೆ ಲೋಕಸಭೆಗೆ ಸ್ಪರ್ಧಿಸುವುದೇ ಆದರೆ, ತಮ್ಮ ಮಠದಲ್ಲಿ ಸಭೆ, ಚರ್ಚೆ ನಡೆಸಿಕೊಳ್ಳಲಿ.
ಹುಬ್ಬಳ್ಳಿ ಮೂರುಸಾವಿರ ಮಠದ ಪಾವಿತ್ರ್ಯತೆ ಹಾಳು ಮಾಡುವುದು ಬೇಡ ಎಂದು ಷಡಕ್ಷರಿ ಶ್ರೀ ಸಲಹೆ ನೀಡಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ತಮ್ಮ ರಾಜಕೀಯ ಅಖಾಡಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬಳಸಿಕೊಂಡಿದ್ದು ಸರಿಯಲ್ಲ ಎಂದು ಷಡಕ್ಷರಿ ಶ್ರೀ ವಿರೋಧಿಸಿದ್ದಾರೆ.
ತಾವು ರಾಜಕೀಯಕ್ಕೆ ದುಮುಕುವುದಾದರೆ ತಮ್ಮ ಮಠದಲ್ಲಿ ಅಥವಾ ಹುಬ್ಬಳ್ಳಿ ಪ್ರೆಸ್ ಕ್ಲಬ್, ಕಲ್ಯಾಣ ಮಂಟಪ ಹೀಗೆ ಬೇಕಾದಷ್ಟು ಸ್ಥಳಗಳಿದ್ದವು.
ಆದರೆ, ಅದೆಲ್ಲವನ್ನು ಬಿಟ್ಟು ಮೂರು ಸಾವಿರ ಮಠದಲ್ಲಿ 40-50 ಸ್ವಾಮೀಜಿಗಳ ಜತೆ ಸುದ್ಧಿಗೋಷ್ಠಿ ನಡೆಸಿದ್ದು ಏಕೆ? ಎಂದು ರುದ್ರಮುನಿ ಶ್ರೀ ಕುಟುಕಿದ್ದಾರೆ.