ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಚಿರತೆ ಇದೀಗ ಮತ್ತೊಮ್ಮೆ ಮೂರು ಕರುಗಳ ಮೇಲೆ ದಾಳಿ ಮಾಡಿದೆ.
ಇದರಿಂದಾಗಿ ಮೂರು ಕರುಗಳು ಚಿರತೆಯ ರಕ್ತದಾಹಕ್ಕೆ ಬಲಿಯಾದಂತಾಗಿವೆ. ಇದರಿಂದಾಗಿ ರೈತ ಸಮುದಾಯ ಮತ್ತಷ್ಟು ಆತಂಕಕ್ಕೆ ಸಿಲುಕಿದೆ.
ಧಾರವಾಡ ತಾಲೂಕಿನ ಮನಸೂರ ಗ್ರಾಮದ ಬಳಿಯ ಜೋಶಿ ಫಾರ್ಮ್ ಹೌಸ್ ನಲ್ಲಿ ಕಟ್ಟಿದ್ದ ಆಕಳ ಕರುಗಳ ಮೇಲೆ ನಿನ್ನೆ ತಡರಾತ್ರಿ ಚಿರತೆ ಈ ದಾಳಿ ನಡೆಸಿದೆ.
ಕಳೆದ ವಾರ ಇದೇ ಗ್ರಾಮದಲ್ಲಿ ಕುಬೇರಪ್ಪ ಮಡಿವಾಳರ ಎಂಬ ರೈತರ ಆಕಳ ಕರು ಮೇಲೆ ದಾಳಿ ಮಾಡಿದ್ದ ಚಿರತೆ ಇದೀಗ ಮತ್ತೆ ಮೂರು ಕರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.
ಕಳೆದ ಒಂದು ವಾರದಿಂದ ಸಹ ಅಲ್ಲಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಿದ್ದರು.
ಆದ್ರು ಸಹ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಚಳ್ಳೆಹಣ್ಣು ತಿನಿಸುತ್ತಾ ಓಡಾಡುತ್ತಿದೆ.
ಆದರೆ ಕಳೆದ ರಾತ್ರಿ ಮತ್ತೆ ಕಾಣಿಸಿಕೊಂಡಿರುವ ಈ ಚಿರತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮತ್ತು ರಾತ್ರಿವೇಳೆ ಜಮೀನಿಗೆ ತೆರಳುವ ರೈತರಲ್ಲಿ ಆತಂಕ ಮೂಡಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿದ್ದು, ಚಿರತೆ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.