ಧಾರವಾಡ prajakiran.com : ಧಾರವಾಡ ಜಿಲ್ಲೆಯ ಅನುದಾನ ರಹಿತ ಶಾಸಗಿ ಶಾಲೆಗಳ ಆರ್ ಟಿ ಇ ಬಾಕಿ ಮೊತ್ತ ತಕ್ಷಣ ಬಿಡುಗಡೆಗೆ ಒತ್ತಾಯಿಸಿ ಧಾರವಾಡ ಅನುದಾನ ರಹಿತ ಶಾಲಾ ಮಂಡಳಿಗಳ ಒಕ್ಕೂಟದಿಂದ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಈ ಹಿಂದೆ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಐದು ವರ್ಷಗಳ ಅವಧಿಯಿತ್ತು. ಈಗ ಪ್ರತಿ ವರ್ಷ ಮಾಡಿರುವುದು ಅವೈಜ್ಞಾನಿಕವಾಗಿದೆ. ಅತ್ಯುತ್ತಮ ಶಾಲೆಗಳಿಗೆ ಒಂದು ಅವಧಿಗೆ ಮಾನ್ಯತೆ ನವೀಕರಣ ನೀಡುವಂತೆ ಒತ್ತಾಯ ಮಾಡಿದರು.
ಅಲ್ಲದೆ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆಗೆ ಏಕರೂಪ ನಿಯಮ ಸರಿಯಲ್ಲ.ಅದರ ಬದಲಿಗೆ ಶಾಲಾ ಶುಲ್ಕದ ಆಧಾರದ ಮೇಲೆ ನಿಗದಿಗೊಳಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಅನುದಾನ ರಹಿತ ಖಾಸಗಿ ಶಾಲೆಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆದರು.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶಕುಮಾರ್ ಅವರೊಂದಿಗೆ ಚರ್ಚಿಸಿ ಸರಕಾರದ ಮೇಲೆ ಒತ್ತಡ ಹೇರುವುದಾಗಿ ಹೊರಟ್ಟಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕ್ಲಾಸಿಕ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಲಕ್ಷಣ ಉಪ್ಪಾರ, ಜೆಎಸ್ ಎಸ್ ಶಿಕ್ಷಣ ಸಂಸ್ಥೆಯ ಮಹಾವೀರ ಉಪಾದ್ಯೆ, ಸಿದ್ಧೇಶ್ವರ ಸಾಲಿಮಠ, ರಾಜೇಂದ್ರ ಮಾಳವಾದೆ, ಶಂಕರ ಹಲಗತ್ತಿ, ಉಪಸ್ಥಿತರಿದ್ದರು.