ಬೆಂಗಳೂರು prajakiran.com : ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.
ರಾಸಲೀಲೆ ಸಿಡಿ ಪ್ರಕರಣ ನೂರಕ್ಕೆ ನೂರರಷ್ಟು ನಕಲಿ. ಇದರ ಹಿಂದೆ ಷಡ್ಯಂತ್ರವಿದೆ. ಈ ಬಗ್ಗೆ ಹೈ ಕಮಾಂಡ್ 24 ಗಂಟೆ ಮೊದಲೇ ಮಾಹಿತಿಯನ್ನು ನೀಡಿತ್ತು.
ಜೊತೆಗೆ 4 ತಿಂಗಳಿಂದ ಪಿತೂರಿ ನಡೆದಿತ್ತು. ನಾನು ಅದರಲ್ಲಿ ಭಾಗಿಯಾಗಿಲ್ಲ. ಹೀಗಾಗಿ ನಾನು ಹೆಚ್ಚಿನ ಮಹತ್ವ ನೀಡಿರಲಿಲ್ಲ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿ, ಈ ರಾಸಲೀಲೆ ಪ್ರಕರಣದಿಂದಾಗಿ ನನ್ನ ಕುಟುಂಬದ ಮರ್ಯಾದೆ ಬೀದಿಪಾಲಾಗಿದೆ. ನನಗೆ ಆಗಿರುವ ನೋವನ್ನು ಯಾರ ಬಳಿ ಹೇಳಿಕೊಳ್ಳಲಿ ಎಂದರು.
ನನ್ನ ಪತ್ನಿ, ಮಕ್ಕಳು, ಸಹೋದರರು, ಸಂಬಂಧಿಕರು, ಕ್ಷೇತ್ರದ ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.
ಕಷ್ಟಕಾಲದಲ್ಲಿದ್ದ ನನಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ವ ಪಕ್ಷಗಳ ಮುಖಂಡರು ನನ್ನ ಪರವಾಗಿ ಮಾತನಾಡಿದ್ದಾರೆ.ನಾನು ಎಲ್ಲರಿಗೂ ಚಿರ ಋಣಿಯಾಗಿದ್ದೇನೆ ಎಂದರು.
ನಾನು ಎಂದಿಗೂ ಹೊಲಸು ತಿನ್ನುವ ಕೆಲಸ ಮಾಡಿಲ್ಲ. ಅಂತಹ ನೀಚ ಕೆಲಸ ಮಾಡಿದ್ದರೆ ನಾನು ಚಾಮುಂಡೇಶ್ವರಿ ಸನ್ನಿಧಿಗೆ, ನಮ್ಮ ಮನೆ ದೇವರಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದರು.
ನನ್ನ ಮೇಲೆ ಎಲ್ಲ ಪಕ್ಷದವರಿಗೂ ಗೌರವವಿದೆ. ನಾನು ಯಾರ ವಿರುದ್ಧವೂ ಹಗೆತನ ಮಾಡಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಲು ನಾನೇ ಕಾರಣನಾಗಿದ್ದೆ. ಹೀಗಾಗಿ ನನ್ನ ಮುಖಕ್ಕೆ ಮಸಿ ಬಳಿಯಲು ಷಡ್ಯಂತ್ರ ನಡೆಸಿದ್ದಾರೆ ಎಂದು ಆಪಾದಿಸಿದರು.
ಅಲ್ಲದೆ, ನಾನೇ ಸ್ವಯಂ ಪ್ರೇರಿತನಾಗಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವೆ. ಈಗಲೂ ನಾನು ಸಚಿವ ಸ್ಥಾನ ಕೊಡಿ ಎಂದು ಕೇಳುವುದಿಲ್ಲ.
ಪಕ್ಷಕ್ಕೆ ಆಗಲಿ, ಸರ್ಕಾರಕ್ಕೆ ಅಗಲಿ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.