ಬೆಂಗಳೂರು prajakiran.com : ವಿದ್ಯುತ್ ಮಗ್ಗಕ್ಕೆ ನೇಣು ಹಾಕಿಕೊಂಡು ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯದ ರಾಜಧಾನಿಯಲ್ಲಿಯೇ ನಡೆದಿದೆ.
ಕೊರೋನಾ ಲಾಕ್ ಡೌನ್ ನಿಂದ ಎದುರಾದ ಸಂಕಷ್ಟವನ್ನು ಎದುರಿಸಲಾಗದ ನೇಕಾರನೊಬ್ಬ ಸೀರೆ ನೇಯುವ ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತ ನೇಕಾರನನ್ನು 55 ವರ್ಷದ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಾಡ್೯ ನಂ 5ರ ಅಗ್ರಹಾರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಲಕ್ಷ್ಮಿಪತಿ ಪತ್ನಿಯೊಂದಿಗೆ ನೇಕಾರಿಕೆ ಮಾಡಿಕೊಂಡು ಕಳೆದ 25 ವರ್ಷಗಳಿಂದಲೂ ಸಂಕಷ್ಟ ಸವಾಲುಗಳ ಮಧ್ಯೆಯೇ ಜೀವನ ನಡೆಸುತ್ತಿದ್ದರು.
ಇದ್ದ ಮಕ್ಕಳು ಇವರನ್ನು ತೊರೆದು ದೂರ ಉಳಿದಿದ್ದರು. ಲಾಕ್ ಡೌನ್ ನಿಂದ ದಂಪತಿಗಳಿಗೆ ಜೀವನ ನಡೆಸುವುದು ಕೂಡ ದುಸ್ಥರವಾಗಿತ್ತು.
ಶನಿವಾರ ಬೆಳಗ್ಗೆ ಪತ್ನಿ ಸೊಪ್ಪು ತರಲು ಹೊರಗಡೆ ಹೋಗಿದ್ದಾಗ ಲಕ್ಷ್ಮೀಪತಿ ಬೆಳಿಗ್ಗೆ 7.30ರ ಸಂದರ್ಭದಲ್ಲಿ ಸೀರೆ ನೇಯುವ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಈ ಕುರಿತು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕೊರೋನಾ ಪ್ರಕರಣ ನೇಕಾರಿಕೆ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ತತ್ಪರಿಣಾಮವಾಗಿ ಈವರೆಗೆ ರಾಜ್ಯದ ಹಲವಡೆ ಒಟ್ಟು 11 ನೇಕಾರರು ನೇಣಿಗೆ ಶರಣಾಗಿದ್ದಾರೆ.
ಇದರಿಂದಾಗಿ ಈ ಸಾವು ನ್ಯಾಯವೇ ಎಂಬ ಪ್ರಶ್ನೆ ಎದುರಾಗಿದ್ದು, ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರವಿರಲಿ… ಎಂದು ಅನೇಕರು ಕಂಬನಿಮಿಡಿದಿದ್ದಾರೆ.