ಬೆಂಗಳೂರು prajakiran.com : ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಬಂಧನದಿಂದ ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಗೆ ಕೊನೆಗೂ ಸುಪ್ರೀಂಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಆದರೆ ಸಾಕ್ಷ್ಯ ನಾಶ
ಪ್ರಕರಣದಲ್ಲಿ ಇತ್ತೀಚೆಗೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿನಯ ಕುಲಕರ್ಣಿ ಗೆ ಬಿಡುಗಡೆ ಭಾಗ್ಯ ಇಲ್ಲ.
ಈ ಪ್ರಕರಣದಲ್ಲಿ ಜಾಮೀನು ದೊರೆತರೆ ಮಾತ್ರ ಹೊರಗಡೆ ಬರಲು ಸಾಧ್ಯ. ಅಲ್ಲಿಯ ವರೆಗೆ ಇನ್ನಷ್ಟು ದಿನ ಬೆಳಗಾವಿ ಜೈಲಿನಲ್ಲಿರಬೇಕಾಗುತ್ತದೆ.
ಈ ಪ್ರಕರಣದಲ್ಲಿ ಜಾಮೀನು ಕೋರಿ ವಿನಯ ಕುಲಕರ್ಣಿ ಪರ ವಕೀಲರು ಬೆಂಗಳೂರು ಹೈಕೋರ್ಟ್ ಮೆಟ್ಟಿಲು ಹತ್ತಬೇಕಿದೆ.
ಅದಕ್ಕಾಗಿ ಸಿದ್ದತೆ ನಡೆದಿದೆ. ಹೈಕೋರ್ಟ್ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜಾಮೀನು ನೀಡುತ್ತಾ ಅಥವಾ ನಿರಾಕರಿಸುತ್ತಾ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.
ಸಾಕ್ಷ್ಯ ನಾಶ ಪ್ರಕರಣದ ಕುರಿತು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಜಯಂತಕುಮಾರ ಅವರು ಸುದೀರ್ಘ 50 ಪುಟಗಳ ತೀರ್ಪು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉದಯ ಲಲಿತ್ ಹಾಗೂ ಅಜಯ ರಸ್ತೋಗಿ
ಅವರಿದ್ದ ಪೀಠ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಾಕ್ಷ್ಯ ನಾಶ ಹಿನ್ನೆಲೆಯಲ್ಲಿ ಧಾರವಾಡ ಪ್ರವೇಶ ನಿರಾಕರಿಸಿದ್ದು, ಪ್ರತಿವಾರ ಸಿಬಿಐ ಕಚೇರಿಗೆ ಹಾಜರಾಗಬೇಕು.
ಮತ್ತೆ ಸಾಕ್ಷ್ಯ ನಾಶ ಆರೋಪ ಕೇಳಿಬಂದರೆ ಜಾಮೀನು ರದ್ದುಪಡಿಸಲಾಗುವುದು ಎಂದು ಹೇಳಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ.