ಹುಬ್ಬಳ್ಳಿ prajakiran.com : ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ.
ರಾಷ್ಟ್ರೀಯ ಬಾಲ ಯೋಜನಾ ಸಂಘ ಧಾರವಾಡ, ಕಾರ್ಮಿಕ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಠಾತ್ ದಾಳಿ ಕೈಗೊಂಡು ಹಲವು ಬಾಲ ಕಾರ್ಮಿಕ ಮಕ್ಕಳ ರಕ್ಷಣೆ ಮಾಡಲಾಗಿದೆ.
ಹುಬ್ಬಳ್ಳಿಯ ದುರ್ಗದ ಬೈಲ್, ಶಾ ಬಜಾರ್, ಮೂರುಸಾವಿರ ಮಠದ ಪ್ರದೇಶ ಹಾಗೂ ಧಾರವಾಡದ ನೆಹರು ಮಾರ್ಕೇಟ್, ಸಿಬಿಟಿ, ಸುಪರ್ ಮಾರ್ಕೇಟ್ ಸೇರಿದಂತೆ ವಿವಿಧ ಕಡೆ ನಡೆಸಲಾದ ದಾಳಿಯಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಸೇರಿದಂತೆ ಸ್ವಂತ ಉದ್ಯೋಗ ಹಾಗೂ ಪಾಲಕರಿಗೆ ಸಹಾಯ ಮಾಡುತ್ತಿದ್ದ ಮಕ್ಕಳನ್ನು ರಕ್ಷಿಸಿ ಪಾಲಕರಿಗೆ ಕಾನೂನಾತ್ಮಕ ತಿಳುವಳಿಕೆ ಮೂಡಿಸಿ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು.
ಹುಬ್ಬಳ್ಳಿ ಧಾರವಾಡ
ಅವಳಿ ನಗರದಲ್ಲಿ ನಡೆದ ಹಠಾತ್ ದಾಳಿಗಳಲ್ಲಿ ಸುಮಾರು 44 ಮಕ್ಕಳನ್ನು ಕೆಲಸದಿಂದ ಮುಕ್ತಿಗೊಳಿಸಲಾಗಿದೆ.
4 ಜನ ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ 20 ಹಾಗೂ ಧಾರವಾಡದಲ್ಲಿ 24 ಮಕ್ಕಳನ್ನು ಕೆಲಸದಿಂದ ಮುಕ್ತಿಗೊಳಿಸಲಾಯಿತು.
ಎನ್.ಸಿ.ಎಲ್.ಪಿ ನಿರ್ದೇಶಕ ಬಾಳಗೌಡ ಪಾಟೀಲ, ಕಾರ್ಮಿಕ ಅಧಿಕಾರಿ ಮಾರಿಕಾಂಬಾ ಹುಲಕೋಟಿ, ಮಲ್ಲಿಕಾರ್ಜುನ ಜೋಗೂರ, ಅಕ್ಬರ ಅಲ್ಲಾಪೂರ, ಶಮಿ ಹೆಚ್, ಸಂಗೀತಾ ಬೆನಕನಕೊಪ್ಪ, ಮೀನಾಕ್ಷಿ ಶಿಂದಿಹಟ್ಟಿ, ತಹಶಿಲ್ದಾರ, ವಿಜಯಕುಮಾರ ಕಡಕೋಳ, ಡಾ ಕಮಲಾ ಬೈಲೂರ, ಸಂಕಲ್ಪ ಸಂಸ್ಥೆಯ ಪ್ರಕಾಶ ಹೂಗಾರ, ಮಕ್ಕಳ ಸಹಾಯವಾಣಿಯ ಚಂದ್ರಶೇಖರ ರಾಹುತರ, ಆನಂದ ಸವಣೂರ, ಉಮಾ ರೊಟ್ಟಿಗವಾಡ, ಮಕ್ಕಳ ರಕ್ಷಣಾ ಘಟಕದ ಕರೆಪ್ಪ ಕೌಜಲಗಿ, ಪ್ರಭಾಕರ ಜಿ, ಮಮ್ಮದಲಿ ತಶಿಲ್ದಾರ, ಎಸ್. ಎಂ ಮುಲ್ಲಾ ಸೇರಿದಂತೆ ಪೋಲಿಸ್ ಸಿಬ್ಬಂದಿ ಇದ್ದರು.
ಆದರೆ ಇದು ಕೇವಲ ನಾಮಕಾ ವಾಸ್ತೆ ಆಗಿ ಒಂದು ದಿನಕ್ಕೆ ಸೀಮಿತಗೊಳ್ಳದೆ, ವರ್ಷವೀಡಿ ನಿತ್ಯ ನಿರಂತರವಾಗಿ ನಡೆಯಲಿ ಎಂಬುದು ಮಕ್ಕಳ ಹಕ್ಕುಗಳ ಹೋರಾಟಗಾರರ ಆಶಯವಾಗಿದೆ.
ಇದಕ್ಕೆ ಧಾರವಾಡ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಕ್ಕಳ ತಂಗುದಾಣ, ಬಾಲಮಂದಿರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ.