ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಮೀಟರ್ ಬಡ್ಡಿ ವ್ಯವಹಾರ, ಅಕ್ರಮ ಭೂ ಒತ್ತುವರಿ ಸೇರಿದಂತೆ ಹಲವು ಆಸ್ತಿಗಳನ್ನು ಕಬ್ಜಾ ಮಾಡಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ವಿರುದ್ದ ದೂರು ನೀಡಲು ನೋಂದವರೇ ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಅನುಮಾನಗಳು ಪೊಲೀಸ್ ಇಲಾಖೆಗೆ ಕಾಡುತ್ತಿದೆ.
ಯಾಕೆಂದರೆ ಈ ಹಿಂದೆ ಆತನ ವಿರುದ್ದ ಹಲವರು ಬಹಿರಂಗವಾಗಿಯೇ ಬಂದು ಪೊಲೀಸರಿಗೆ ಲಿಖಿತ ಮೀಟರ್ ಬಡ್ಡಿ, ಜೀವ ಬೆದರಿಕೆ, ಆಸ್ತಿ ಕಬಳಿಕೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ನೋಂದ ಕೆಲವರು ಪೊಲೀಸರ ಸಹವಾಸವೇ ಬೇಡ ಎಂದು ಊರು ಬಿಟ್ಟಿದ್ದರು. ಅಲ್ಲದೆ, ಕೆಲವರು ಅವರ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿ ಧಾರವಾಡ ಜಿಲ್ಲೆಯ ಸಂಸದರು ಆಗಿರುವ ಕೇಂದ್ರ ಸಚಿವರ ಮೊರೆ ಹೋಗಿದ್ದರು.
ಆನಂತರ ಎಚ್ಚೆತ್ತುಕೊಂಡ ಪೊಲೀಸರು ಫ್ರೂಟ್ ಇರ್ಫಾನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರೂ, ಆತನನ್ನು ಕರೆದು ವಿಚಾರಣೆ ನಡೆಸಿರಲಿಲ್ಲ.
ಅಲ್ಲದೆ, ಆತನ ವಿರುದ್ದ ಯಾರೇ ದೂರು ನೀಡಿದರೂ ಪೊಲೀಸರ ಮೂಲಕವೇ ಆತನಿಗೆ ಕ್ಷಣಾರ್ಧದಲ್ಲಿ ಮಾಹಿತಿ ತಲುಪಿರುತ್ತಿತ್ತು. ಹೀಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಮೇಲೆ ಕೆಲವರು ನಂಬಿಕೆಯೇ ಕಳೆದುಕೊಂಡಿದ್ದರು.
ಹಣ, ಆಸ್ತಿ ಹೊದರೂ, ಸುಮ್ಮನೇ ಮೌನಕ್ಕೆ ಶರಣಾಗಿದ್ದರು. ಕೆಲವರು ಮಾತ್ರ ಜೀವ ಬೆದರಿಕೆ ಹಾಗೂ ತಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ ಈ ಬಗ್ಗೆ ನೇರವಾಗಿಯೇ ಪೊಲೀಸ ಆಯುಕ್ತರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದರು.
ಆಗಿನ ಡಿಸಿಪಿ ಡಿ.ಎಲ್. ನಾಗೇಶ ಕರೆದು ತಾಕೀತು ಮಾಡಿದ್ದರು. ಇದಾದ ಬಳಿಕವೇ ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು.
ಆದರೂ ನ್ಯಾಯಾಲಯದ ಮೊರೆ ಹೋಗಿ ಆರು ವಾರಗಳ ತಡೆಯಾಜ್ಞೆ ತಂದಿದ್ದ. ಇದಾದ ಬಳಿಕ ಕೋವಿಡ್ ಬಂದಿದ್ದರಿಂದ ಆತನ ತಡೆಯಾಜ್ಞೆ ಮುಂದುವರೆಯಿತು. ಅಷ್ಟರಲ್ಲೇ ಶೂಟೌಟ್ ಆಗಿಯೇ ಬಿಟ್ಟಿತ್ತು.
ಹೀಗಾಗಿ ಆತನ ಗ್ಯಾಂಗ್ ಈಗ ರ್ದುಬಲಗೊಂಡಿದೆ. ಅಲ್ಲದೆ, ಆತ ಮಾಡಿದ ಅನೇಕ ಆಸ್ತಿಗಳ ಮೇಲೆ ಹಲವರ ಕಣ್ಣು ಬಿದ್ದಿವೆ. ಅದನ್ನು ಲಪಟಾಯಿಸಲು ಕೆಲವರು ಸಂಚು ಮಾಡಿದ್ದಾರೆ.
ಇನ್ನು ಕೆಲವರು ಆತನಿಂದ ಅನ್ಯಾಯ ಸರಿಪಡಿಸಿಕೊಳ್ಳಲು ಆಸ್ತಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪೊಲೀಸರ ಬಳಿ ಹೋದರೆ ಹೇಗೆ, ನಮಗೆ ನ್ಯಾಯ ಸಿಗಬಹುದಾ.
ಎಲ್ಲಿ ಹೋದರೆ ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂಬ ಪ್ರಶ್ನೆ ಮಾಡಿ ಹಲವು ಮುಖಂಡರ ಕದ ಬಡಿಯುತ್ತಿದ್ದಾರೆ ಎಂದು ಪ್ರಜಾಕಿರಣ.ಕಾಮ್ ಗೆ ಖಚಿತ ಮೂಲಗಳಿಂದ ವಿಶ್ವಾಸರ್ಹ ಮಾಹಿತಿ ದೊರೆತಿದೆ.
ಪೊಲೀಸ್ ಆಯುಕ್ತ ಆರ್. ದಿಲೀಪ್ ಹಾಗೂ ಧಾರವಾಡ ಎಸಿಪಿ ಅನುಷಾ ಜಿ. ಅವರು ವಿಶೇಷ ಮುತುವರ್ಜಿ ವಹಿಸಿ ಆ ಕೇಸ್ ಗಳಿಗೆ ಮರುಜೀವ ನೀಡಲು ಹಾಗೂ ವಿಶೇಷವಾಗಿ ಫ್ರೂಟ್ ಇರ್ಫಾನ್ ನಿಂದ ನೋಂದವರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಆದರೂ ನೋಂದ ಜನತೆ ಪೊಲೀಸರ ಬಳಿ ತೆರಳಿ ತಮ್ಮ ನೋವು ತೋಡಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಯಾಕೆ. ಅವರಿಗೆ ಈ ಬಗ್ಗೆ ಯಾವ ರೀತಿ ವಿಶ್ವಾಸ ತುಂಬಬೇಕಿದೆ ಎಂಬ ಪ್ರಶ್ನೆ ಎದುರಾಗಿದೆ.
ಕೆಲ ಪೊಲೀಸರು ಮಾಡುವ ಕೆಲಸದಿಂದಾಗಿ ಹುಬ್ಭಳ್ಳಿ-ಧಾರವಾಡ ಪೊಲೀಸ ಆಯುಕ್ತರು ಹಾಗೂ ಧಾರವಾಡ ಎಸಿಪಿ ಮುಜುಗರ ಅನುಭವಿಸುವಂತಾಗಿದೆಯೇ ಎಂಬ ಪ್ರಶ್ನೆ ಪೊಲೀಸ್ ಇಲಾಖೆಗೆ ಕಾಡುತ್ತಿದೆ ಎಂದು ಪ್ರಜಾಕಿರಣ.ಕಾಮ್ ಗೆ ಉನ್ನತ ಮೂಲಗಳಿಂದ ಖಚಿತ ಮಾಹಿತಿ ದೊರೆತಿದೆ.