ಧಾರವಾಡ ಪ್ರಜಾಕಿರಣ.ಕಾಮ್ : ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವ ದೇವಿ ಜಾತ್ರೆಯ ಅಂಗವಾಗಿ ನಾಲ್ಕನೇ ದಿನವಾದ ಗುರುವಾರ ದೇವಿಯರ ಹೊನ್ನಾಟ ಭಕ್ತಿ ಭಾವದಿಂದ ನಡೆಯಿತು.
ಗ್ರಾಮದಲ್ಲಿ ಬೆಳಗ್ಗೆಯಿಂದ ಆರಂಭವಾದ ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಹೊನ್ನಾಟವು ಭಕ್ತರ ಕಣ್ಮನ ಸೆಳೆಯಿತು.
ಯುವಕರು, ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಸಂಭ್ರಮದಿಂದ ಹೊನ್ನಾಟದಲ್ಲಿ ಪಾಲ್ಗೊಂಡು ದೇವಿಯ ಆರಾಧನೆಯಲ್ಲಿ ಧನ್ಯತಾ ಭಾವ ಮೆರೆದರು.
ಹೊನ್ನಾಟದಲ್ಲಿ ಭಂಡಾರ ಎರಚುತ್ತಿದ್ದ ಪರಿಣಾಮ ಮೆರವಣಿಗೆ ಮಾರ್ಗದುದ್ದಕ್ಕೂ ಸುವರ್ಣ ಲೇಪನ ಮಾಡಿದಂತಾಗಿತ್ತು.
ದೇವಿಯರ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಭಕ್ತಿಯಿಂದ ಮೈಮರೆತಿದ್ದರೆ, ಇತರರು ಭಂಡಾರ ಎರಚುತ್ತ ದೇವಿಯರ ನಾಮಸ್ಮರಣೆ ಮಾಡುತ್ತಿದ್ದರು.
ಹೊನ್ನಾಟದಲ್ಲಿ ನರೇಂದ್ರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಭಾಗವಹಿಸಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ಭಕ್ತರ ದಂಡು ಕಾಣುತ್ತಿತ್ತು.
ಎರಡು ದಶಕಗಳ ನಂತರ ನಡೆಯುತ್ತಿರುವ ಜಾತ್ರೆಯ ನಿಮಿತ್ತ ಪ್ರತಿದಿನ ಸಂಜೆ ದೇವಿ ಕುರಿತ ಪ್ರವಚನ, ವಿವಿಧ ಪೂಜ್ಯರ ಆಶೀರ್ವಚನ, ನಂತರ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸುತ್ತಿವೆ.