ಕಾಂಗ್ರಾ prajakiran.com : ಭೂಕುಸಿತ ಸಂಭವಿಸಿದ ಹಿನ್ನೆಲೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಸುಮಾರು 9 ಜನ ಅವಶೇಷದಡಿಯಲ್ಲಿ ಸಿಲುಕಿರುವ ಘಟನೆ ಹಿಮಾಚಲ ಪ್ರದೇಶದ ಧರ್ಮಾಶಾಲಾದ ಕಾಂಗ್ರಾ ಜಿಲ್ಲೆಯ ಬೋಹ್ ಕಣಿವೆಯಲ್ಲಿ ನಡೆದಿದೆ.
ಎನ್ಡಿಆರ್ಎಫ್ ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದು, ಈಗಾಗಲೇ ನಾಲ್ಕು ಜನರನ್ನು ರಕ್ಷಿಸಲಾಗಿದೆ. ಅವಶೇಷದಡಿಯಲ್ಲಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಹ್ ಕಣಿವೆಯಲ್ಲಿ ಉಂಟಾದ ಭೂಕುಸಿತದಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮನೆಯ ಅವಶೇಷದಡಿಯಲ್ಲಿ 9 ಜನ ಸಿಲುಕಿರುವ ಸಾಧ್ಯತೆ ಇದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕೃತಿ ವಿಕೋಪದಿಂದ ಮನೆಗಳು ನಾಶವಾದವರಿಗೆ ರಾಜ್ಯ ಸರ್ಕಾರ ಹೊಸ ಮನೆಗಳನ್ನು ನಿರ್ಮಿಸಿಕೊಡಲಿದೆ ಎಂದು ಭರವಸೆ ನೀಡಿದ್ದಾರೆ.