ಧಾರವಾಡ prajakiran.com : ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಹಾವೇರಿಯ 44 ಹಾಗೂ ಗದಗನ ಒಬ್ಬರು, ವಿಜಯಪುರ, ಬಾಗಲಕೋಟೆಯ ಮೂವರು ಯುವಕರಿಂದ ಕೋಟ್ಯಾಂತರ ರೂಪಾಯಿ ಪಡೆದು, ನೌಕರಿ ಕೊಡಿಸದೆ ವಂಚನೆ ಮಾಡಿದ್ದ ಎಸ್ ಜಿ ಎಸ್ ಎಸ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿಯನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಧಾರವಾಡದ ಉಪನಗರ ಠಾಣೆ ಪೊಲೀಸರು ಈ ಪ್ರಕರಣ ಸಂಬಂಧ ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಆನಂತರ ಹೆಚ್ಚಿನ ವಿಚಾರಣೆಗೆ ನಿನ್ನೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಕೇಳಿದ್ದರು.
ಆದರೆ, ನ್ಯಾಯಾಲಯ ಇಬ್ಬರನ್ನು ಕೇವಲ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಇದೀಗ ಅದು ಕೂಡ ಆಸ್ಪತ್ರೆಯಲ್ಲಿ ಕಳೆದು ಹೋಗಲಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಇದೇ ವೇಳೆ ಪೂರ್ಣಿಮಾ ಸೊಪ್ಪಿಮಠ ಅವರನ್ನು ಧಾರವಾಡದ ಕಮಲಾಪುರದಲ್ಲಿರುವ ಎಸ್ ಜಿ ಎಸ್ ಎಸ್ ಕನ್ಸಟೆನ್ಸಿಯ ಕಚೇರಿಗೆ ಮಂಗಳವಾರ ಮಧ್ಯಾಹ್ನ (ಇಂದು) ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದುಕೊಂಡು ಹೋಗಿ ಕಚೇರಿ ಪರಿಶೀಲನೆ ನಡೆಸಿ ಪ್ರಕರಣ ಕುರಿತು ವಿಚಾರಣೆ ನಡೆಸಿ ಮಾಹಿತಿ ಸಂಗ್ತಹಿಸುತ್ತಿದ್ದಾರೆ.
ವೈದ್ಯಕೀಯ ಪರೀಕ್ಷೆ ವೇಳೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಉಪನಗರ ಪೊಲೀಸರ ನಡೆ ಹಣ ಕಳೆದುಕೊಂಡವರಿಗೆ ಚಿಂತಾಕ್ರಾಂತರನ್ನಾಗಿದೆ.
ಹೀಗಾಗಿ ಹಣ ಕಳೆದುಕೊಂಡವರು ಮತ್ತೆ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದ್ದು, ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲೇಬೇಕು ಎಂದು ಪಟ್ಟು ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ ಎಚ್ಚರಿಸಿದರು.